ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ, ಬಣ ರಾಜಕೀಯ, ಅಸಮಾಧಾನಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದು, ಎಲ್ಲಾ ಗೊಂದಲಗಳನ್ನು ಬಗೆಹರಿಸಲಿದ್ದಾರೆ.
ಮೂರು ದಿನಗಳ ರಾಜ್ಯ ಭೇಟಿಗಾಗಿ ಇಂದು ಮಧ್ಯಾಹ್ನ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಯತ್ನಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಚಿವರನ್ನು ಪ್ರತ್ಯೇಕವಾಗಿ ಕರೆಸಿ ಚರ್ಚೆ ನಡೆಸಲು ಅರುಣ್ ಸಿಂಗ್ ಮುಂದಾಗಿದ್ದು, ಸಚಿವರನ್ನು ಹೊರತುಪಡಿಸಿ ಬೇರಾರಿಗೂ ಬಿಜೆಪಿ ಕಚೇರಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿದೆ.
ಹಾಗಾಗಿ ನಾಯಕತ್ವ ಬದಲಾವಣೆ ಇಂದೇ ಫೈನಲ್ ಆಗಲಿದ್ದು, ಸಿಎಂ ಬಿಎಸ್ ವೈ ಭವಿಷ್ಯ ಕೂಡ ಇಂದು ಅಥವಾ ನಾಳೆ ನಿರ್ಧಾರವಾಗಲಿದೆ. ನಾಳೆ ಅಸಮಾಧಾನಿತ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದು, ಜೂನ್ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿದೆ.