ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕ್ರಾಸ್ ಬಳಿಯ ಇಣಚಗಲ್ ಸೇತುವೆ ಕೆಳಗೆ ಇತ್ತೀಚೆಗೆ ಪತ್ತೆಯಾದ ಯುವತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಸೋದರಮಾವನನ್ನು ಬಂಧಿಸಿದ್ದಾರೆ.
ಜೂನ್ 9 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಮಲ್ಲಪ್ಪ ಬಿಲ್ಲಾಡ (17) ಎಂಬ ಯುವತಿ ಹತ್ಯೆ ಪ್ರಕರಣದಲ್ಲಿ ಸೋದರಮಾವ ಸಿದ್ರಾಮಪ್ಪ ಕಲ್ಲಪ್ಪ ಅವಟಿ (43) ಬಂಧಿಸಲಾಗಿದೆ.
ಕೊಲೆಯಾದ ದಿನದಿಂದ ದೇವರಹಿಪ್ಪರಗಿಯ ಮಲ್ಲಯ್ಯನ ಗುಡಿಯಲ್ಲಿ ಸಿದ್ರಾಮಪ್ಪ ತಲೆಮರೆಸಿಕೊಂಡಿರುವ ಮಾಹಿತಿ ಆಧರಿಸಿ ತನಿಖೆ ನಡೆಸಿದ ಎಸ್ಐ ವಿನೋದ ದೊಡ್ಡಮನಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಗೆ ಕಾರಣ ತಿಳಿದು ಬಂದಿದೆ.
ಕೊಲೆಯಾಗಿರುವ ಯುವತಿಗೆ ತಂದೆಯಿಲ್ಲ, ತಾಯಿ ಇದ್ದಾರೆ. ಮನೆಯ ಆಗುಹೋಗುಗಳನ್ನು ಬಾಲಕಿಯ ಸೋದರಮಾವ ಸಿದ್ದರಾಮಪ್ಪನೇ ನೋಡಿಕೊಳ್ಳುತ್ತಿದ್ದ. ಆರತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರು ಜೊತೆಗಿರುವ ಫೋಟೋವನ್ನು ಆಕೆಯ ಪ್ರಿಯತಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದನ್ನು ನೋಡಿ ಕೋಪಗೊಂಡಿದ್ದ ಸಿದ್ರಾಮಪ್ಪ, ಕೂಡಲ ಸಂಗಮದಲ್ಲಿ ಮದುವೆ ಮಾಡಿಸುವುದಾಗಿ ಆರತಿಯನ್ನು ರಾತ್ರಿ ಮನೆಯಿಂದ ಕರೆದುಕೊಂಡು ಹೋಗಿ ಜಮ್ಮಲದಿನ್ನಿ ಕ್ರಾಸ್ ಬಳಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.