ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವಂತೆ ಮಾಡಿದ ಸಿಟಿ ಪ್ರಕರಣ ಸಂಬಂಧ ಇಂದು ಮಹತ್ವದ ವಿಚಾರಣೆ ನಡೆಯಿತು. ತಿಂಗಳಾನುಗಟ್ಟಲೇ ತಲೆಮರೆಸಿಕೊಂಡು, ಕೋರ್ಟ್ನಿಂದ ಜಾಮೀನು ಪಡೆದಿರುವ ಆರೋಪಿಗಳಾದ ನರೇಶ್ಗೌಡ ಹಾಗೂ ಶ್ರವಣ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಇಬ್ಬರು ಆರೋಪಿಗಳನ್ನು ಪ್ರತ್ಯೇಕವಾಗಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸಿದರು.
ನ್ಯಾಯಾಲಯದ ಆದೇಶದ ಪ್ರತಿ ಹಾಗೂ ಷರತ್ತುಗಳನ್ನು ಪೂರೈಕೆ ಮಾಡಿರುವ ಬಗ್ಗೆ ಪರಿಶೀಲನೆ ಬಳಿಕ ತನಿಖೆ ನಡೆದಿದೆ. ಇಡೀ ಪ್ರಕರಣದಲ್ಲಿ ಇದುವರೆಗಿನ ನಡೆದಿರುವ ತನಿಖೆ ಆಧರಿಸಿ ಆರೋಪಿಗಳಿಗೆ 60 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಆರೋಪಿತರ ವಿಚಾರಣೆಗೂ ಮುನ್ನ ಕಮಿಷನರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಭೇಟಿ ಮಾಡಿದ್ದರು. ಸಂತ್ರಸ್ತ ಯುವತಿ ಪರಿಚಯದ ಬಗ್ಗೆ ಆರೋಪಿ ನರೇಶ್ ಬಾಯ್ಬಿಟ್ಟಿದ್ದಾರೆ. ನನಗೆ ಅನ್ಯಾಯ ಆಗಿದೆ ಅಂತ ಸ್ನೇಹಿತನ ಮೂಲಕ ಪರಿಚಯ ಆಯ್ತು. ಪರಿಚಯದ ಬಳಿಕ ಆಗಿರೋ ಅನ್ಯಾಯದ ಬಗ್ಗೆ ಹೇಳಿದ್ಳು. ಆದ್ರೆ ಸಿಡಿ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅಣ್ಣ ಅಂತಾನೆ ಸಂತ್ರಸ್ತ ಯುವತಿ ನನ್ನನ್ನ ಕರೆಯುತ್ತಿದ್ದಳು. ನಾನು ಯಾರಿಗೂ ಯಾವುದೇ ತರಹ ಬ್ಲಾಕ್ ಮೇಲ್ ಮಾಡಿಲ್ಲ. ನಾನೊಬ್ಬ ಪತ್ರಕರ್ತ ಅನ್ನೋ ಕಾರಣಕ್ಕೆ ನ್ಯಾಯಕ್ಕಾಗಿ ಯುವತಿ ಸಂಪರ್ಕ ಮಾಡಿದ್ದಳು. ಆಕೆಗೆ ಆಗಿರೋ ಅನ್ಯಾಯದ ಬಗ್ಗೆ ಹೇಳಿದ್ದು ಬಿಟ್ರೆ ಸಿಡಿ ಬಗ್ಗೆ ಹೇಳಿಲ್ಲ. ಸಿಡಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಆರೋಪಿ ನರೇಶ್ ವಿಚಾರಣೆ ವೇಳೆ ತಿಳಿಸಿದ್ದಾರೆ.
ನರೇಶ್ ಮತ್ತು ಶ್ರವಣ್ ಸ್ನೇಹದ ಬಗ್ಗೆ, ಈ ಮೊದಲು ಎಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಬಗ್ಗೆ ಹೇಳಿಕೆ ಪಡೆಯಲಾಗಿದೆ. ಇಬ್ಬರ ಪರಿಚಯದಿಂದ ಹಿಡಿದು ದೂರು ದಾಖಲಾಗೋವರೆಗೂ ಇಬ್ಬರ ಸಂಬಂಧ ಕುರಿತು ವಿಚಾರಣೆ ನಡೆಯಿತು. ಇಬ್ಬರು ಬಳಸುತ್ತಿದ್ದ ಮೊಬೈಲ್ ಫೋನ್ ಪರಿಶೀಲನೆ ಮಾಡಲಾಗಿದೆ. ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿರೋ ಬಗ್ಗೆ ಯುವತಿ ಸೇರಿದಂತೆ ಹಲವರಿಂದ ಸಾಕಷ್ಟು ಎವಿಡೆನ್ಸ್ ಕಲೆಹಾಕಿರುವ ಪೊಲೀಸರು ಆ ಬಗ್ಗೆ ಆರೋಪಿಗಳ ಬಳಿ ವಿಚಾರಿಸಿದರು. ನರೇಶ್ ಹಾಗೂ ಶ್ರವಣ್ ಜೊತೆ ಸಂಪರ್ಕದಲ್ಲಿ ಇದ್ದೋರ ಸ್ಟೇಟ್ ಮೆಂಟ್ ಮುಂದಿಟ್ಟುಕೊಂಡು ವಿಚಾರಣೆ ನಡೆಸಲಾಗಿದೆ.