ಚಾಮರಾಜನಗರ: ಲಾಕ್ಡೌನ್ ವೇಳೆ ಮಾತ್ರೆ ಖರೀದಿಸಲು ಬಂದಿದ್ದ ಯುವಕನಿಗೆ ದರ್ಪ ತೋರಿ ಕಾಲಿನಿಂದ ಒದ್ದು ನಿಂದಿಸಿದ್ದ ಎಎಸ್ಐ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೇ 23 ರಂದು ಯುವಕನೋರ್ವ ಮಾತ್ರೆ ಖರೀದಿಸಲು ಬೈಕ್ನಲ್ಲಿ ನಗರಕ್ಕೆ ಬಂದಿದ್ದ. ಈ ವೇಳೆ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸ್ಐ ರಾಮಸ್ವಾಮಿ, ಯುವಕನಿಗೆ ದರ್ಪ ತೋರಿ ಕಾಲಿಂದ ಒದ್ದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಯುವಕನಿಗೆ ನಿಂದಿಸಿ, ಒದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯ ಬಳಿಕ ಎಎಸ್ಐ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ದಿವ್ಯ ಸಾರಾ ಥಾಮಸ್, ಘಟನೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಯುವಕನಿಗೆ ಕಾಲಿನಿಂದ ಒದ್ದು ಅಶಿಸ್ತು ತೋರಿದ ಎಎಸ್ಐ ರಾಮಸ್ವಾಮಿ ವಿರುದ್ಧ ಕ್ರಮ ಕೈಗೊಂಡಿದ್ದು, ರಾಮಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.