ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆ ದೇಶಾದ್ಯಂತ ಅನೇಕ ಜನ ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಅಕ್ಷಯ ಪಾತ್ರೆ ಪ್ರತಿಷ್ಠಾನವು ಅನೇಕ ಜನರ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದೆ. ಅದರಲ್ಲೂ ನಗರದ ಕೂಲಿ ಕಾರ್ಮಿಕರು, ಸ್ಮಶಾನದ ಸಿಬ್ಬಂದಿ, ಪೋಲಿಸರು, ಆರೋಗ್ಯ ಸಿಬ್ಬಂದಿಗಳಿಗೆ ಫುಡ್ ಪ್ಯಾಕೆಟ್ ಗಳ ವಿತರಣೆ ಮಾಡುತ್ತಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ 95,000 ಜನರಿಗೆ ಫುಡ್ ಪ್ಯಾಕೆಟ್ ಗಳನ್ನು ವಿತರಣೆ ಮಾಡುತ್ತಿದೆ. ಅದರಲ್ಲಿ 1,450 ಸ್ಮಶಾನ ಸಿಬ್ಬಂದಿಗಳಿಗೆ ನಿತ್ಯ ಊಟ ಹಂಚುತ್ತಿದ್ದಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ 700 ಆರೋಗ್ಯ ಸಿಬ್ಬಂದಿಗೆ ಆಹಾರದ ಪೊಟ್ಟಣಗಳನ್ನು ನೀಡುತ್ತಿದ್ದಾರೆ. ಕೆ.ಆರ್.ಮಾರ್ಕೆಟ್ ನಲ್ಲಿ 2500 ಕೂಲಿ ಕಾರ್ಮಿಕರು,ಭಿಕ್ಷಕರಿಗೆ ಮಧ್ಯಾಹ್ನದ ಊಟ ಪಡೆಯುತ್ತಿದ್ದಾರೆ. ಜೊತೆಗೆ ದಿನವೂ 17000 ಪೋಲಿಸರಿಗೆ ನಿತ್ಯ ಆಹಾರ ಸೇವೆ ನೀಡಲಾಗುತ್ತಿದೆ.
ಹಾಗೆಯೇ ಸರ್ಕಾರಿ ಆಸ್ಪತ್ರೆಯ 5000 ಸಿಬ್ಬಂದಿಗೆ ಪ್ರತಿದಿನ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ. ಈ ಮೂಲಕ ಕೊರೊನಾ ಸಮಯದಲ್ಲೂ ಹೃದಯವಂತಿಕೆಯನ್ನು ಮೆರೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಕ್ಷಯ ಪಾತ್ರೆ ಪ್ರತಿಷ್ಠಾನದ ಸಾರ್ವಜನಿಕ ಸಂಪರ್ಕಾಧಿಕಾರಿ ನವೀನ್ ನೀರದ್ ದಾಸ್, ಬೆಂಗಳೂರಿನ 17 ಸ್ಮಶಾನಗಳಿಗೆ ಊಟ ಪೂರೈಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ, ಮಕ್ಕಳಿಗೆ ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.