ಬೆಂಗಳೂರು, ಜೂನ್ 01; ಬಿಬಿಎಂಪಿ ವಿಮಾನದ ಮೂಲಕ ಬೆಂಗಳೂರು ನಗರದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡುವ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಿದೆ. ನಗರದ ಆಯ್ದ ಪ್ರದೇಶದಲ್ಲಿ ಇದನ್ನು ಜಾರಿಗೊಳಿಸಬೇಕಿತ್ತು.
ಸೋಮವಾರದಿಂದ ಬುಧವಾರದ ತನಕ ನಗರದ ಆಯ್ದ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಲು ಏರಿಯಲ್ ವರ್ಕ್ಸ್ ಏರೋ ಎಲ್ಎಲ್ಪಿ ಸಂಸ್ಥೆಯ ಮುಂದಾಗಿತ್ತು.
ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಸೂಚನೆ ಅನ್ವಯ ಪ್ರಾಯೋಗಿಕ ಯೋಜನೆಗೆ ತಡೆ ನೀಡಲಾಗಿದೆ. ಕೆಲವು ತಾಂತ್ರಿಕ ಕಾರಣದಿಂದಾಗಿ ದ್ರಾವಣ ಸಿಂಪಡಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಪಾಲಿಕೆ ಹೇಳಿದೆ.
ಸೋಮವಾರ ಶಿವಾಜಿನಗರ, ಕೆ. ಆರ್. ಮಾರ್ಕೆಟ್ಗಳಲ್ಲಿ ಪ್ರಾಯೋಗಿಕವಾಗಿ ದ್ರಾವಣ ಸಿಂಪಡಣೆಗೆ ತಯಾರಿ ನಡೆದಿತ್ತು. ಅಂತಿಮ ಹಂತದಲ್ಲಿ ಬಿಬಿಎಂಪಿ ಅನುಮತಿಯನ್ನು ನಿರಾಕರಿಸಿತು.
ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದು, “ಪರಿಸರ ಮತ್ತು ಆರೋಗ್ಯದ ವಿಚಾರದಲ್ಲಿ ಕೆಲವು ಪ್ರಶ್ನೆಗಳಿವೆ. ಈ ಬಗ್ಗೆ ಸ್ಪಷ್ಟನೆ ಬರುವ ತನಕ ನಾವು ದ್ರಾವಣ ಸಿಂಪಡಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ” ಎಂದು ಹೇಳಿದ್ದಾರೆ.
300 ಲೀಟರ್ ದ್ರಾವಣವನ್ನು ಹೊತ್ತ ವಿಮಾನ ನಗರದ ಆಯ್ದ ಪ್ರದೇಶಗಳಲ್ಲಿ ಹಾರಾಟ ನಡೆಸುವ ಮೂಲಕ ದ್ರಾವಣವನ್ನು ಸಿಂಪಡಣೆ ಮಾಡಬೇಕಿತ್ತು. ಬೆಳಗ್ಗೆ 8 ರಿಂದ 10 ಗಂಟೆಯ ತನಕ ಮೂರು ದಿನ ಈ ಸಿಂಪಡಣೆ ನಡೆಯಬೇಕಿತ್ತು.
ಪ್ರಾಯೋಗಿಕವಾಗಿ ದ್ರಾವಣ ಸಿಂಪಡಣೆ ಮಾಡುವ ಕಾರ್ಯಕ್ಕೆ ಕಂದಾಯ ಸಚಿವ ಆರ್. ಅಶೋಕ ಚಾಲನೆ ನೀಡಿದ್ದರು. ಸರ್ಕಾರ ಈ ಯೋಜನೆಗೆ ಯಾವುದೇ ಹಣವನ್ನು ನೀಡುತ್ತಿಲ್ಲ.