ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚಿಗಷ್ಟೆ ಕೆಟ್ಟೊ ಅಭಿಯಾನದಡಿ ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ 11 ಕೋಟಿಯಲ್ಲಿ ವಿರುಷ್ಕಾ ದಂಪತಿಯದ್ದು 2 ಕೋಟಿ ದೇಣಿಗೆ ಕೂಡ ಇತ್ತು. ಇಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ವಿರಾಟ್ ಕೊಹ್ಲಿ 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.
ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದ ಮುಗ್ಧ ಮಗುವಿನ ಪ್ರಾಣ ಉಳಿಸುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ. ಅಯಾನ್ಷ್ ಗುಪ್ತಾ ಎಂಬ ಪುಟ್ಟ ಮಗು ಬೆನ್ನುಮೂಳೆಯ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಈ ಖಾಯಿಲೆಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಔಷಧಿಯ ಅಗತ್ಯವಿತ್ತು. ಹೀಗಾಗಿ ಮಗುವಿನ ಪೋಷಕರು ಹಣ ಸಂಗ್ರಹಿಸಲು ಆರಂಭಿಸಿದ್ದರು.
ಈ ವಿಷಯವನ್ನು ತಿಳಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಮಗುವಿನ ಪೋಷಕರಿಗೆ ಸರಿಯಾದ ಸಮಯಕ್ಕೆ ಒದಗಿಸಿ ಔಷಧಿ ಕೊಡಿಸುವುದರ ಮೂಲಕ ಮುಗ್ಧ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಾಡಿರುವ ಈ ಅತ್ಯುತ್ತಮ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.