ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ಕಡೆಯಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳು ನಡೀತಾನೇ ಇದೆ. ಈ ಕೊರೊನ ಸಂಕಷ್ಟದಲ್ಲಂತೂ ಕೈ ಮೀರಿ ಸಹಾಯ ಮಾಡುತ್ತಿದ್ದಾರೆ ಕಿಚ್ಚ ಅಂಡ್ ಟೀಂ. ಇದೀಗ ಮಹಿಳಾ ಅಭಿಮಾನಿಯೊಬ್ಬರ ಕಷ್ಟಕ್ಕೆ ಹೆಗಲು ಕೊಟ್ಟಿದೆ ಕಿಚ್ಚ ಚಾರಿಟೇಬಲ್ ಟ್ರಸ್ಟ್. ಕಿಚ್ಚನ ಸಹಾಯ ನೆನೆದು ಅಭಿಮಾನಿ ಕಣ್ಣೀರಿಟ್ಟಿದ್ದಾರೆ.
ಬಾದ್ಶಾ ಕಿಚ್ಚ ಸುದೀಪ್ ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ..ಕೊರೊನಾ ಸಂಧರ್ಭ ಮಾತ್ರವಲ್ದೆ ಬಹಳ ಹಿಂದಿನಿಂದಲೂ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿಸ್ವಾರ್ಥ ಸೇವೆ ಮಾಡ್ತಾನೇ ಬರ್ತಿದ್ದಾರೆ..ಸರ್ಕಾರಿ ಶಾಲೆ ದತ್ತು ಪಡೆಯೋದು, ಬಡ ಮಕ್ಕಳ ವಿದ್ಯಾಬ್ಯಾಸ ಜವಾಬ್ದಾರಿ , ವೃದ್ದರಿಗೆ , ನಿಸ್ಸಾಹಯಕರಿಗೆ ತಮ್ಮ ಕೈಲಾದ ನೆರವು ನೀಡಿದ್ದಾರೆ..
ಇದೀಗ ಕೊರೊನಾ ಸಂಕಷ್ಟದಲ್ಲಂತೂ ಒಂದು ಹೆಜ್ಜೆ ಮುಂದಿಟ್ಟು , ಹಗಲಿರುಳು ಎನ್ನದೇ ಕೆಲಸ ಮಾಡ್ತಿದ್ದಾರೆ ಕಿಚ್ಚ ಚಾರಿಟೇಬಲ್ ಟೀಂ..ಯೆಸ್ ಈ ಹಿಂದೆ ಅವಶ್ಯಕತೆಯಿರುವ ಆಸ್ಪತ್ರೆಗಳಿಗೆ 300 ಆಕ್ಸಿಜನ್ ಸಿಲಿಂಡರ್ಗಳನ್ನ ಪೂರೈಸಿದ್ರು..ಆ ನಂತ್ರ ಕಿಚ್ಚನ ಕೈ ತುತ್ತು ಎಂಬ ಹೆಸರಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಆಹಾರ ಪೂರೈಕೆ, ಒಂದಷ್ಟು ಏರಿಯಾಗಳಿಗೆ ಭೇಟಿ ನೀಡಿ ಕಷ್ಟದಲ್ಲಿರೋರಿಗೆ ದಿನಸಿ ಕಿಟ್, ಊಟ ಹೀಗೆ ತಮ್ಮ ಕೈಲಾದ ಸೇವೆ ಮಾಡ್ತಾನೇ ಇದ್ದಾರೆ.
ರೀಸೆಂಟಾಗಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪಿದ 24 ಕುಟುಂಬಗಳಲ್ಲಿ,ಬಹಳ ಸಂಕಷ್ಟದಲ್ಲಿರುವ 12 ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ ಹಾಗೂ 12 ಕುಟುಂಬದ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿಯನ್ನ ಕಿಚ್ಚ ಚಾರಿಟೇಬಲ್ ಟ್ರಸ್ಟ್ ವಹಿಸಿಕೊಂಡಿದೆ.
ಅಷ್ಟೇ ಅಲ್ಲಾ ಬಿಗ್ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದ್ದಿದ್ರಿಂದ ಈ ವಿಚಾರವನ್ನ ಸ್ವತಃ ಸೋನು ಪಾಟೀಲ್ ಕಿಚ್ಚನ ಗಮನಕ್ಕೆ ತಂದಿದರು. ವಿಷಯ ತಿಳಿದ ಕೂಡಲೇ ಕಿಚ್ಚ ಸುದೀಪ್ ತಮ್ಮ ಟ್ರಸ್ಟ್ ವತಿಯಿಂದ ಆಸ್ಪತ್ರೆಯ ಸಂಪೂರ್ಣ ವೆಚ್ಚ ಭರಿಸಿದ್ದಾರೆ.
ಇದೀಗ ಮತ್ತೊಬ್ಬ ಹೆಣ್ಣುಮಗಳ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಸುದೀಪ್ ಅಭಿಮಾನಿ ಸೌಮ್ಯ ಎಂಬೋರ ಪತಿ ಹಾಗೂ ಇಡೀ ಕುಟುಂಬಕ್ಕೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ತೀವ್ರ ಅನಾರೋಗ್ಯವಾದ ಕಾರಣ ಪತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದು, 50,000 ಹಣ ಕಟ್ಟಿದ್ದಾರೆ. ಆದರೆ, ಕೊನೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಾದರೆ ,ಲಕ್ಷಕ್ಕೂ ಹೆಚ್ಚು ಹಣ ಕಟ್ಟುವಂತೆ ಆಸ್ಪತ್ರೆಯವರು ಒತ್ತಾಯಿಸಿದ್ದಾರೆ. ಇದರಿಂದ ಕಂಗಾಲಾದ ಸೌಮ್ಯ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ಗೆ ಕರೆ ಮಾಡಿ ಮನವಿ ಮಾಡಿದಾಗ ಸುದೀಪ್ ಕಡೆಯಿಂದ ನೆರವು ದೊರಕಿದೆ. ಈ ವಿಷಯವನ್ನು ಕಣ್ಣೀರು ಹಾಕುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಅಭಿಮಾನಿ ಸೌಮ್ಯ.
ಅಂದ್ಹಾಗೇ ಕಿಚ್ಚನ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ರಮೇಶ್ ಕಿಟ್ಟಿ, ರಮೇಶ್ , ಪುರುಷೊತ್ತಮ್ ಹಗಲಿರುಳು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಮತ್ತು ತಂಡ ಎಷ್ಟೋ ಜೀವಗಳ ರಕ್ಷಣೆಗೆ ನೆರವಾಗಿದ್ದಾರೆ. ಎಷ್ಟೋ ಮಂದಿ ಕಿಚ್ಚನ ಸಹಾಯದಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕಿಚ್ಚ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇನ್ನಷ್ಟು ನೆರವಿನ ಕಾರ್ಯಗಳು ಹೀಗೆ ಮುಂದುವರಿಲಿ ಅನ್ನೋದು ಎಲ್ಲರ ಆಶಯ.