ಬಿಗ್ಬಾಸ್ ಮನೆಯಿಂದ ಹೊರಬರುವ ವೇಳೆ ನಟಿ ಶುಭಾ ಪೂಂಜಾ ಕೊರೊನಾ ವಾರಿಯರ್ಸ್ ಆಗಿ ಸೇವೆ ಮಾಡೋಣ, ಜನರಿಗೆ ನೆರವಾಗೋಣ ಎಂದು ಮಾತು ಕೊಟ್ಟಿದ್ದರು. ಅದರಂತೆ ನಡೆದುಕೊಂಡು ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 72 ದಿನಗಳ ಕಾಲ ಇದ್ದ ಶುಭಾ ಪೂಂಜಾ ಸೇರಿದಂತೆ 11 ಸ್ಪರ್ಧಿಗಳಿಗೆ ಕೊರೊನಾದಿಂದ ರಾಜ್ಯ ಎದುರಿಸುತ್ತಿರುವ ಭೀಕರತೆಯ ಮಾಹಿತಿ ನೀಡಿ ಹೊರಗೆ ಕರೆಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳು ಆತಂಕಕ್ಕೀಡಾಗಿ ಕಣ್ಣೀರು ಹಾಕಿದ್ದರು.
ಇಷ್ಟು ದಿನ ನಮಗೆ ರಾಜ್ಯದಲ್ಲಿ ಏನು ಆಗುತ್ತಿದೆ ಅಂತಾನೇ ಗೊತ್ತಿರಲಿಲ್ಲ. ಆದರೆ ಇದೀಗ ನಮಗೆ ಪರಿಸ್ಥಿತಿ ಅರ್ಥವಾಗಿದ್ದು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲು ನಿರ್ಧರಿಸಿರುವುದಾಗಿ ಶುಭಾ ಪೂಂಜಾ ಮಾತು ಕೊಟಿದ್ದರು.
ಕೊಟ್ಟ ಮಾತಿನಿಂತೆ ಶುಭಾ ನಡೆದುಕೊಂಡಿದ್ದಾರೆ. ರಸ್ತೆಗಿಳಿದು ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಡಿಯಿಟ್ಟಿದ್ದಾರೆ. ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ.
ಶುಭಾ ಪೂಂಜಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನೇರವಾಗಿ ರೇಷನ್ ಖರೀದಿಸಿ ಅದನ್ನು ಬಡವರಿಗೆ ಹಂಚುವ ಕೆಲಸ ಮಾಡಿದ್ದಾರೆ. ಆಹಾರ ಕಿಟ್ ವಿತರಿಸುತ್ತಿರುವ ಕೆಲವೊಂದು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡು, ನನ್ನ ಚಿಕ್ಕ ಪ್ರಯತ್ನ ಮುಂದಿನ ದಿನದಲ್ಲಿ ಇನ್ನೂ ಒಂದಷ್ಟು ಜನಗಳಿಗೆ ತಲುಪುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಈಗಾಗಲೇ ಹಲವಾರು ಮಂದಿ ಕಲಾವಿದರು ಸಹಾಯ ಹಸ್ತ ಚಾಚಿದ್ದಾರೆ. ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್, ನಟ ಉಪೇಂದ್ರ, ನಟಿಯರಾದ ರಾಗಿಣಿ, ಸಂಜನಾ ರಸ್ತೆಗಿಳಿದು ಬಡವರ ಬೆನ್ನಿಗೆ ನಿಂತಿದ್ದಾರೆ.