ಬೆಂಗಳೂರು, : ಮುಂಬೈ ಪೊಲೀಸರು ವೃದ್ಧ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋಗೆ ಹಿನ್ನೆಲೆ ಧ್ವನಿ ಕೊಟ್ಟಿದ್ದ ಕೈ ಪಕ್ಷದ ಮಹಿಳಾ ಮಣಿ ತೊಂದರೆಯಲ್ಲಿ ಸಿಲುಕಿದ್ದಾರೆ. ಕರ್ನಾಟಕ ಪೊಲೀಸರಿಗೆ ಛೀಮಾರಿ ಹಾಕಿ ವೈರಲ್ ಮಾಡಿದ್ದ ಕೈ ಪಕ್ಷದ ಮಹಿಳಾ ಮಣಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೈ ಪಕ್ಷದ ನಾಯಕಿ ಇದೀಗ ಪೊಲೀಸರ ವಿಚಾರಣೆ ಎದುರಿಸುವಂತಾಗಿದೆ. ತಪ್ಪು ಸಾಬೀತಾದಲ್ಲಿ ಬಂಧಿಸಿದರೂ ಅಚ್ಚರಿ ಪಡುವಂತಿಲ್ಲ!
ಪದ್ಮಾ ಹರೀಶ್ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಕೈ ಪಕ್ಷದ ನಾಯಕಿ. ದಕ್ಷಿಣ ವಿಭಾದ ಸೈಬರ್ ಪೊಲೀಸರು ಪದ್ಮಾ ಹರೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿ ಪ್ರಕರಣ ದಾಖಲಿಸಿರುವ ಪೊಲೀಸರು ಸದ್ಯದ ಪರಿಸ್ಥಿತಿಯಲ್ಲಿ ಬಂಧಿಸಿದರೂ ಅಚ್ಚರಿ ಪಡಬೇಕಿಲ್ಲ. ವೃದ್ಧ ವ್ಯಕ್ತಿಯೊಬ್ಬರಿಗೆ ನಾಲ್ವರು ಪೊಲೀಸರು ಬೀದಿಯಲ್ಲಿ ಲಾಠಿಯಿಂದ ತಳಿಸುವ ವಿಡಿಯೋ ಮುಂಬಯಿ ಪೊಲೀಸರಿಗೆ ಸೇರಿದ್ದು. ಅದು 2020 ಏಪ್ರಿಲ್ನಲ್ಲಿ ಲಾಕ್ ಡೌನ್ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಆ ವಿಡಿಯೋ ನೋಡಿದರೆ ಪೊಲೀಸರ ಮೇಲೆ ಎಂಥವರಿಗೂ ದ್ವೇಷ ಉಕ್ಕಿ ಹರಿದು ಬರುತ್ತದೆ.
ಪದ್ಮಾ ಹರೀಶ್ ತನ್ನ ವಿವರ ಉಲ್ಲೇಖಿಸಿ , ಪೊಲೀಸರನ್ನು ಸೀಳು ನಾಯಿಗಳು, ನಾ. ಲಾ ಮಕ್ಕಳು, ಪೊಲೀಸರು ಹೆಣ ಸುಡೋಕೆ ಲಾಯಕ್ಕು, ನರ ರಕ್ಷಕರು ಅಲ್ಲ, ನರ ಭಕ್ಷಕರು ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋ ಕರ್ನಾಟಕದ್ದು ಅಲ್ಲ ಎಂಬುದನ್ನು ಅರಿಯದ ಪದ್ಮಾ ಹರೀಶ್ ಬಾಯಿಗೆ ಬಂದಂಗೆ ಪೊಲೀಸರ ವಿರುದ್ಧ ಮಾತನಾಡಿದ್ದರು. ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಪರಿಶೀಲಿಸಿದ್ದ ಪೊಲೀಸರು, ಹಳೇ ವಿಡಿಯೋಗೆ ಹಿನ್ನೆಲೆ ಧ್ವನಿ ನೀಡಿ ಮರ್ಯಾದೆ ತೆಗೆದಿರುವ ಬಗ್ಗೆ ಪೊಲೀಸ್ ಆಯುಕ್ತ ಕಮಲಪಂತ್ ಅವರ ಗಮನಕ್ಕೆ ತಂದಿದ್ದರು. ನಗರ ಪೊಲೀಸ್ ಆಯುಕ್ತ ಕಮಲಪಂತ್ ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.