ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿದ್ದು ಅನೇಕ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿವೆ. ಸದ್ಯ ಇಂದು ಇದೇ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಬಂದಿದೆ. ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್ಗಳು ತಲುಪಿವೆ. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್ಗಳು ಈಗ ವೈಟ್ಫೀಲ್ಡ್ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಆಗಮಿಸಿವೆ.
ಜಮ್ಶೆಡ್ಪುರದಿಂದ ನಿನ್ನೆ ಮುಂಜಾನೆ 3ಕ್ಕೆ ಹೊರಟಿದ್ದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು 30 ಗಂಟೆಯಲ್ಲಿ ಬೆಂಗಳೂರು ತಲುಪಿದೆ. ಐಎಸ್ಒ ಕಂಟೇನರ್ ಮೂಲಕ ಆಕ್ಸಿಜನ್ ಆಗಮಿಸಿದ್ದು ಒಟ್ಟು 17.50 ಸಾವಿರ ಲೀಟರ್ ಆಕ್ಸಿಜನ್ ತರಿಸಿಕೊಳ್ಳಲಾಗಿದೆ. ಆಕ್ಸಿಜನ್ ಹೊತ್ತ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.ಇನ್ನು ಈ ಬಗ್ಗೆ ಮೇ 10 ರಂದು ಮಾತನಾಡಿದ್ದ ಕಂದಾಯ ಸಚಿವ ಅಶೋಕ್, ಆಕ್ಸಿಜನ್ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ರೈಲಿನ ಮೂಲಕ ಆಕ್ಸಿಜನ್ ರಾಜ್ಯಕ್ಕೆ ಬರುತ್ತದೆ. ಎಲ್ಲಾ ಕೊವಿಡ್ ಸೆಂಟರ್ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಬೆಂಗಳೂರಿನಲ್ಲಿ 2 ಸಾವಿರ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಪ್ರತಿ ತಾಲೂಕಿಗೂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಕೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದ್ದರು.ಸಿಸಿಸಿ ಸೆಂಟರ್ನಲ್ಲೇ ತುರ್ತು ಆಕ್ಸಿಜನ್ ಸೌಲಭ್ಯವಿರುತ್ತದೆ. ಕೊವಿಡ್ ಸೆಂಟರ್ಗಳಲ್ಲಿ ಊಟದ ವ್ಯವಸ್ಥೆ ಜೊತೆ ಆಕ್ಸಿಜನ್ ಸೌಲಭ್ಯ ಒದಗಿಸುತ್ತೇವೆ. ಈಗಿನಿಂದಲೇ 3ನೇ ಅಲೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ. 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಶೋಕ್ ಹೇಳಿದ್ದರು.