ನವದೆಹಲಿ: ಭೂಗತ ಪಾತಕಿಯಾಗಿದ್ದ ಛೋಟಾ ರಾಜನ್ (62) ಕೋವಿಡ್ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾನೆ ಎಂಬ ಸುದ್ದಿಗಳನ್ನು ನವದೆಹಲಿಯ ಏಮ್ಸ್ ಆಸ್ಪತ್ರೆ ಅಲ್ಲಗಳೆದಿದೆ.
ರಾಜನ್ ಇನ್ನೂ ಬದುಕಿದ್ದಾನೆ. ಅವನಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಏಮ್ಸ್ ಮೂಲಗಳು ಖಚಿತಪಡಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಜನ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆದು ಆತನ ಇನ್ನಿಲ್ಲ ಎಂಬ ಸಂದೇಶಗಳು ಹರಿದಾಡಿದ್ದವು.
ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಛೋಟಾ ರಾಜನ್ನ್ನು ಮುಂಬೈ ಪೊಲೀಸರು 2015 ರಲ್ಲಿ ಇಂಡೊನೇಷಿಯಾದಲ್ಲಿ ಬಂಧಿಸಿ ಭಾರತಕ್ಕೆ ಕರೆ ತಂದಿದ್ದರು. ಆತನ ಮೇಲೆ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ಬೆದರಿಕೆ, ಹತ್ಯೆಯತ್ನ ಪ್ರಕರಣಗಳು ದಾಖಲಾಗಿದ್ದವು.
ಪತ್ರಕರ್ತ ಜೋತಿರ್ಮಯ್ ಡೇ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಭೀತಾಗಿದ್ದರಿಂದ 2018 ರಲ್ಲಿ ಛೋಟಾ ರಾಜನ್ಗೆ ಮೊಕಾ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ನಂತರ ದೆಹಲಿಯ ತಿಹಾರ್ ಜೈಲಿನಲ್ಲಿ ಆತನನ್ನು ಇರಿಸಲಾಗಿತ್ತು.
ಇತ್ತೀಚೆಗೆ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿರುವ ರಾಜನ್ ಅನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.