ಬೆಂಗಳೂರು,ಮೇ.5-ಕೊರೊನಾ ಸೋಂಕಿನಿಂದ ಮೃತಪಟ್ಟ ನಿಮ್ಮ ಕುಟುಂಬ ಸದಸ್ಯರ ಮೃತದೇಹಗಳ ಶವಸಂಸ್ಕಾರ ಸಮರ್ಪಕವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲ ಅಂದರೆ ಮೃತದೇಹಗಳ ಅರೆಬೆಂದ ದೇಹದ ಭಾಗಗಳು ನಾಯಿ ನರಿ ಪಾಲಾಗಲಿದೆ.ಹೇಗೆ ಅಂತಿರಾ. ಹಾಗಾದರೆ ಈ ಸುದ್ದಿ ಓದಿ..
ನಗರದಲ್ಲಿ ದಿನೇ ದಿನೇ ನೂರಾರು ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿದ್ದಾರೆ. ಸಾಯುತ್ತಿರುವವರ ಶವಗಳ ಸಂಸ್ಕಾರ ಮಾಡಲು ನಗರದಲ್ಲಿ ಸ್ಮಶಾನಗಳು ಸಾಕಾಗುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ನೂರಾರು ಶವಗಳನ್ನು ಬೇಕಾಬಿಟ್ಟಿ ಸುಡಲಾಗುತ್ತಿದೆ.
ಈಗಾಗಲೇ ಸುಮನಹಳ್ಳಿ ರುದ್ರಭೂಮಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಕಾರಣ ಸ್ಮಶಾನವನ್ನುಕೆಲಕಾಲ ಸ್ಥಗಿತಗೊಳಿಸಲಾಗಿದೆ.ಹೀಗಾಗಿ ತಾವರೆಕೆರೆ ಮತ್ತು ಚಾಮರಾಜಪೇಟೆಯಲ್ಲಿರುವ ಚಿತಾಗಾರಗಳಲ್ಲಿ ಬೇಕಾಬಿಟ್ಟಿ ಶವಸಂಸ್ಕಾರ ನಡೆಸಲಾಗುತ್ತಿದೆ.
ಮೃತಪಟ್ಟವರ ಸಂಬಂಧಿಕರು ಇರುವವರೆಗೆ ಮಾತ್ರ ಚಿತಾಗಾರದಲ್ಲಿ ಬೆಂಕಿ ಇರುತ್ತದೆ. ನಮ್ಮವರ ಸಂಸ್ಕಾರ ಮುಗಿಯಿತು ಎಂದು ನೀವು ಸ್ಥಳದಿಂದ ಹೊರಟರೆ ಕೂಡಲೆ ಅರೆಬೆಂದ ಶವಗಳನ್ನು ಹೊರತೆಗೆದು ಎಸೆಯುತ್ತಿದ್ದಾರೆ.
ಚಿತಾಗಾರಗಳಿಂದ ಹೊರಬಂದ ಅರೆಬೆಂದ ಶವಗಳು ನಾಯಿಗಳಿಗೆ ಆಹಾರವಾಗುತ್ತಿದೆ. ಮಾತ್ರವಲ್ಲ ಮೃತದೇಹದ ಅವಶೇಷಗಳನ್ನು ನಾಯಿಗಳು ಅಕ್ಕಪಕ್ಕದ ಗ್ರಾಮಗಳಿಗೆ ಎಳೆದು ತಂದು ಹಾಕುತ್ತಿರುವುದು ಸಾಮಾನ್ಯವಾಗಿದೆ.ತಾವರೆಕರೆ ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲೇಂದರಲ್ಲಿ ಮೃತದೇಹಗಳ ಅವಶೇಷಗಳು ಕಂಡು ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದು ತಾವರೆಕೆರೆ ಚಿತಾಗಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ರುದ್ರಭೂಮಿಗಳಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕೊರೊನಾ ಸೋಂಕಿನಿಂದ ಸಾವನ್ನಪುತ್ತಿರುವವರ ಶವಗಳಿಗಾದರೂ ಸಾಂಪ್ರಾದಾಯಿಕವಾಗಿ ಸಂಸ್ಕಾರವಾಗುವಂತೆ ನೋಡಿಕೊಳ್ಳಬೇಕಿದೆ.