ಬೆಂಗಳೂರು: ಸಿಲಿಕಾನ್ ಸಿಟಿ ವ್ಯಾಪ್ತಿಯಲ್ಲಿ ನಡೆದಿದ್ದ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ ಸುದ್ದಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು.
ಸಂಸದ ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸೂಕ್ತ ತನಿಖೆಯ ಭರವಸೆ ನೀಡಿದ್ರು. ಅಲ್ಲದೇ ಪ್ರಕರಣವನ್ನು ಕಳೆದ ರಾತ್ರಿಯೇ ಸಿಸಿಬಿಗೆ ಕೂಡ ವರ್ಗಾಯಿಸಿದ್ರು. ಈ ಬೆನ್ನಲ್ಲೇ ತನಿಖೆ ಶುರು ಮಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಠಾಣೆಗೆ ಭೇಟಿ ಕೊಟ್ಟು, ಆರೋಪಿಗಳಾದ ರೋಹಿತ್, ನೇತ್ರಾ ವಿಚಾರಣೆ ನಡೆಸಿದ್ರು.
ಇವರು ನೀಡಿದ ಮಾಹಿತಿ ಮೇರೆಗೆ ರಾತ್ರೋರಾತ್ರಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೋವಿಡ್ ವಾರ್ ರೂಂ ಉಸ್ತುವಾರಿ ವಹಿಸಿದ್ದ ಡಾ. ರೆಹಾನ್, ಬಿಬಿಎಂಪಿಯ ಇಬ್ಬರು ವೈದ್ಯರು, ಡಾಟಾ ಎಂಟ್ರಿ ಆಪರೇಟರ್ಗಳು, ನೋಡಲ್ ಆಫೀಸರ್ಗಳು, ಕೆಲವು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳ ಪಿಆರ್ಓಗಳು, ಸಣ್ಣ ಪುಟ್ಟ ಆಸ್ಪತ್ರೆಗಳ ವೈದ್ಯರು ಕೂಡ ಸೇರಿದ್ದಾರೆ.
ಇನ್ನೂ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಂಭವ ಇದೆ. ಸಂಜೆ ದಕ್ಷಿಣ ವಲಯ ಕೋವಿಡ್ ವಾರ್ ರೂಂ ಸೇರಿದಂತೆ ನಾಲ್ಕು ವಾರ್ ರೂಂಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಹಲವು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯಾವುದೇ ಕಾರಣಕ್ಕೂ ಈ ಅಕ್ರಮ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಿಸಿಬಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.