ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರತಿ ಆವೃತ್ತಿಯಲ್ಲೂ ಎರಡು ವಿಭಿನ್ನ ಜರ್ಸಿಗಳಲ್ಲಿ ಕಣಕ್ಕೆ ಇಳಿಯುತ್ತದೆ. ವಿರಾಟ್ ಕೊಹ್ಲಿ ತಂಡವು ಪ್ರತಿ ಐಪಿಎಲ್ನಲ್ಲಿ ಹಸಿರು ವಿಶೇಷ ಜರ್ಸಿ ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಈ ಮೂಲಕ ಪರಿಸರದ ಸುರಕ್ಷತೆಯ ಕುರಿತು ಅರಿವು ಮೂಡಿಸುತ್ತದೆ. ಈ ಬಾರಿ, ದೇಶದಲ್ಲಿ ಕೊರೊನಾದಿಂದ ಉಂಟಾದ ಬಿಕ್ಕಟ್ಟನ್ನು ಮನದಲ್ಲಿಟ್ಟುಕೊಂಡು ಆರ್ಸಿಬಿ ಮತ್ತೊಮ್ಮೆ ಸಾರ್ವಜನಿಕರಲ್ಲಿ ಜಾಗೃತಗೊಳಿಸಲು ತಮ್ಮ ಜರ್ಸಿಯಿಂದ ಜನರಿಗೆ ಸಹಾಯ ಮಾಡಲು ನಿರ್ಧರಿಸಿದೆ. ಈ ಸಮಯದಲ್ಲಿ, ಇಡೀ ದೇಶವು ಕೊರೊನಾ ವೈರಸ್ನ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಆಮ್ಲಜನಕ, ಔಷಧ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಸರತಿ ಸಾಲುಗಳಿವೆ. ಈ ಬಿಕ್ಕಟ್ಟಿನಿಂದ ದೇಶವನ್ನು ಹೊರಹಾಕಲು ಎಲ್ಲರೂ ಹೋರಾಡುತ್ತಿದ್ದಾರೆ. ಆರ್ಸಿಬಿ ಸಹ ಇದಕ್ಕೆ ಕೊಡುಗೆ ನೀಡಲು ಮುಂದಾಗಿದೆ.
ಸಂತ್ರಸ್ತರಿಗೆ ಸಹಾಯ ಮಾಡಲು ಕೈ ಚಾಚುತ್ತೇವೆ
ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಆರ್ಸಿಬಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹ ಭಾಗಿಯಾಗಿವುದರೊಂದಿಗೆ, ಸಂತ್ರಸ್ತರಿಗೆ ಸಹಾಯ ಮಾಡಲು ಕೈ ಚಾಚುತ್ತೇವೆ ಎಂದು ಹೇಳಿಕೊಂಡಿದೆ. ಆರ್ಸಿಬಿ ತನ್ನ ನಾಯಕ ವಿರಾಟ್ ಕೊಹ್ಲಿ ಮೂಲಕ ಈ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿದೆ. ಇದರೊಂದಿಗೆ ಮುಂಬರುವ ಪಂದ್ಯದಲ್ಲಿ ಬೆಂಗಳೂರು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಮುಂಬರುವ ಪಂದ್ಯವೊಂದರಲ್ಲಿ ಅವರು ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸುವ ಸಲುವಾಗಿ ವಿಶೇಷ ನೀಲಿ ಜರ್ಸಿ ಧರಿಸಲು ಆರ್ಸಿಬಿ ನಿರ್ಧರಿಸಿದೆ. ಹಾಗೂ ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶವನ್ನು ಬರೆಯಲಾಗಿರುತ್ತದೆ.
ಆರ್ಸಿಬಿ ಸಹಾಯ ಹೀಗಿರಲಿದೆ
ಆರ್ಸಿಬಿಯನ್ನು ಮುನ್ನಡೆಸುತ್ತಿರುವ ಭಾರತೀಯ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಫ್ರ್ಯಾಂಚೈಸ್ ಹಾಕಿದ ವಿಡಿಯೋದಲ್ಲಿ ಅವರು ನೆಲಮಟ್ಟದಲ್ಲಿ ಹೇಗೆ ಸಹಾಯ ಮಾಡಬಹುದು ಎಂದು ಚರ್ಚಿಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಸರಬರಾಜು ಮಾಡುವುದಕ್ಕೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರ್ಥಿಕ ಸಹಾಯ ಮಾಡಲಿದೆ ಎಂದು ಆರ್ಸಿಬಿ ತಿಳಿಸಿದೆ. ಇಷ್ಟು ವರ್ಷ ಪಂದ್ಯವೊಂದರಲ್ಲಿ ಪರಿಸರದ ಸಂರಕ್ಷಣೆಯ ಕುರಿತು ಸಂದೇಶವನ್ನು ರವಾನಿಸಲು ಹಸಿರು ಜೆರ್ಸಿ ತೊಟ್ಟು ಆಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವವನ್ನು ಸಲ್ಲಿಸಲು ನೀಲಿ ಜೆರ್ಸಿ ತೊಟ್ಟು ಆಡಲಿದೆ.ಕೊಹ್ಲಿ ಹೇಳಿದ್ದೇನು?
ಈ ಬಗ್ಗೆ ಮಾತಾನಾಡಿದ ಕೊಹ್ಲಿ, ಆರ್ಸಿಬಿ ಪಂದ್ಯವೊಂದರಲ್ಲಿ ವಿಶೇಷ ನೀಲಿ ಬಣ್ಣದ ಜರ್ಸಿಯನ್ನು ಧರಿಸಲಿದ್ದು, ನಮ್ಮ ಮ್ಯಾಚ್ ಕಿಟ್ನಲ್ಲಿ ಮಹತ್ವದ ಸಂದೇಶವನ್ನು ನೀಡಲಿದೆ, ಈ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡಿದವರಿಗೆ ಗೌರವ ಮತ್ತು ಒಗ್ಗಟ್ಟನ್ನು ತೋರಿಸುವುದು ಇದರ ಉದ್ದೇಶವಾಗಿದೆ. ಕಳೆದ ವರ್ಷದಿಂದಲೂ ಕೊರೊನಾ ವಾರಿಯರ್ಸ್ ಪಿಪಿಇ ಕಿಟ್ಗಳನ್ನು ಧರಿಸಿರುತ್ತಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುತ್ತಾ ಈ ಒಂದು ವರ್ಷವನ್ನು ಕಳೆದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಆಟಗಾರರು ಸಹಿ ಮಾಡಿದ ಜರ್ಸಿಯನ್ನು ಹರಾಜು ಮಾಡುವ ಮೂಲಕ ಆರ್ಸಿಬಿ ತಂಡವು ಹಣವನ್ನು ಸಂಗ್ರಹಿಸುತ್ತದೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಬೆಂಬಲಿಸಲು ನಮ್ಮ ಹಿಂದಿನ ಆರ್ಥಿಕ ಕೊಡುಗೆಯನ್ನು ಹೆಚ್ಚಿಸುತ್ತದೆ ಎಂದು ಕೊಹ್ಲಿ ಹೇಳಿದರು. ಆರ್ಸಿಬಿ ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.