ಉಡುಪಿ, : ಕರ್ನಾಟಕದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ. ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ. ಯಾವುದೇ ಸಂಭ್ರಮಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬೊಮ್ಮಾಯಿ, ಸ್ಥಳೀಯ ವಿಚಾರದಲ್ಲಿ ಚುನಾವಣೆ ನಡೆದಿದೆ. ರಾಜ್ಯ, ದೇಶಮಟ್ಟದ ಚುನಾವಣೆ ನಡೆದಿಲ್ಲ. ಈ ಫಲಿತಾಂಶ ಸರ್ಕಾರದ ಮೇಲಿನ ಜನಾದೇಶ ಅಲ್ಲ ಎಂದು ತಿಳಿಸಿದರು.ಇನ್ನು ಇದೇ ವೇಳೆ ಕೊರೊನಾ 2ನೇ ಅಲೆ ಭಯಾನಕವಾಗಿದ್ದು, ಜನ ಜಾಗೃತಿ ಆಗಲೇಬೇಕಿದೆ. ಒಬ್ಬನಿಂದ ಹಲವರಿಗೆ ಸೋಂಕು ಹರಡುತ್ತಿದ್ದು, ಜನ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸರಕಾರ ಹಾಗೂ ಜಿಲ್ಲಾಡಳಿತ ಜನತೆಯ ಜೊತೆ ಇದೆ ಎಂದರು.
ರಾಜ್ಯದಲ್ಲಿ ಜನತಾ ಲಾಕ್ ಡೌನ್ ಇದ್ದು, ಇನ್ನಷ್ಟು ಕಠಿಣ ಮಾಡುವ ಅವಶ್ಯಕತೆ ಇದೆ. ಜನರ ಸಹಕಾರದಿಂದ ಮಾತ್ರ ಇದು ಯಶಸ್ವಿ ಆಗುತ್ತದೆ. ಈ ಜನತಾ ಲಾಕ್ ಡೌನ್ ರಿಸಲ್ಟ್ ಬರಲು 15 ದಿನ ಬೇಕು.
ಬೆಂಗಳೂರು ಮತ್ತು ಮೈಸೂರಿನಲ್ಲಿ ಕಠಿಣ ಕಾನೂನು ಅಗತ್ಯ ಇದೆ ಎಂದು ತಿಳಿಸಿದರು.ಆದೇಶ ಘೋಷಣೆಯಾದ 10-12ನೇ ದಿನ ತಜ್ಞರು ಸಭೆ ಸೇರುತ್ತಾರೆ, ಜನಪ್ರತಿನಿಧಿಗಳು ತಜ್ಞರ ಸೂಚನೆ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಂತರ ಎಲ್ಲವನ್ನು ಸಮಗ್ರವಾಗಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.