ಬೆಂಗಳೂರು: ರಾಜ್ಯದಲ್ಲಿ ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಜನತಾ ಲಾಕ್ಡೌನ್ ಹಿನ್ನೆಲೆ ಮದ್ಯಪ್ರಿಯರು ಬಾರ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿರುವ ಸನ್ನಿವೇಶ ನಗರದ ಬಹುತೇಕ ಮದ್ಯದಂಗಡಿಗಳ ಮುಂದೆ ಕಂಡು ಬರುತ್ತಿದೆ.
ಸರ್ಕಾರ ಮದ್ಯದಂಗಡಿಗಳನ್ನು ಕೂಡ ಮುಚ್ಚಿದರೆ ‘ಎಣ್ಣೆ’ ಮುಂದಿನ ಹದಿನಾಲ್ಕು ದಿನ ಸಿಗಲಾರದು ಎಂಬ ನಿಟ್ಟಿನಲ್ಲಿ ಮದ್ಯಪ್ರಿಯರು ಮದ್ಯ ಖರೀದಿಗಾಗಿ ಮದ್ಯದಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಕೈಚೀಲದಲ್ಲಿ ಎಣ್ಣೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇತ್ತ ರಾಜಾಜಿನಗರ ಎಣ್ಣೆಯಂಗಡಿ ಹೌಸ್ ಫುಲ್ ಆಗಿದ್ದು, ಮದ್ಯಪ್ರಿಯರು ದೊಡ್ಡ ದೊಡ್ಡ ಕೈಚೀಲ ತಂದು ಮದ್ಯ ಖರೀದಿಯಲ್ಲಿ ತೊಡಗಿದ್ದರು. ಆದರೆ ಸರ್ಕಾರಕ್ಕೆ ಆದಾಯ ಮುಖ್ಯವಾಗಿರುವ ಕಾರಣ ಮದ್ಯದ ಅಂಗಡಿಗಳನ್ನು ಪೂರ್ಣವಾಗಿ ಬಂದ್ ಮಾಡುವುದಿಲ್ಲ. ಹೊಸ ಮಾರ್ಗಸೂಚಿಯಲ್ಲಿ ಇದಕ್ಕೂ ಸಮಯವನ್ನು ನಿಗದಿ ಮಾಡುವ ಸಾಧ್ಯತೆಯಿದೆ.
ಕಳೆದ ಬಾರಿಯ ಲಾಕ್ಡೌನ್1 ಸಮಯದಲ್ಲಿ ಮದ್ಯದ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಇದರಿಂದ ಮದ್ಯ ಸಿಗದೆ ಮದ್ಯಪ್ರಿಯರು ಕಂಗಾಲಾಗಿದ್ದರು. ಹಾಗಾಗಿ ಈ ಬಾರಿ ಮೊದಲೇ ಮದ್ಯ ಶೇಖರಣೆ ಮಾಡಲು ಪಾನಪ್ರಿಯರು ಮುಂದಾಗಿದ್ದಾರೆ.