ಗೋಕಾಕ: ದೇಶಾದ್ಯಂತ ಹಬ್ಬಿರುವ ಕೋರೋನಾ ವೈರಸ್ ಪ್ರಖರತೆ ಕಳೆದ ಬಾರಿಗಿಂತ ನಾಲ್ಕು ಪಟ್ಟು ಹೆಚ್ಚು ತೀಕ್ಷಣತೆಯನ್ನು ಹೊಂದಿರುವ ಈ ಸಂದರ್ಭದಲ್ಲಿ ಸರಕಾರದ ನಿಷ್ಕ್ರೀಯತೆಯಿಂದ ಉಂಟಾಗಿರುವ ಆಕ್ಸಿಜನ್ ಕೊರತೆ ಹಾಗೂ ರೆಮಿಡಿಸಿಯರ್ ಇಂಜಕ್ಷನಗಳ ಅಭಾವದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಕೂಡಲೇ ಆಕ್ಸಿಜನ್ ಪೂರೈಕೆ ಹಾಗೂ ಜೀವರಕ್ಷಕ ರೆಮಿಡಿಸಿವಿಯರ್ ಇಂಜಕ್ಷನಗಳ ಲಭ್ಯತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸುಮಾರು 2-3 ತಿಂಗಳಗಳ ಹಿಂದೆಯೇ ಕೋರೋನಾ ವೈರಸ್ ಕುರಿತು ಸರ್ಕಾರಗಳಿಗೆ ಸಲಹೆ ನೀಡಿರುವ ಪರಿಣಿತರ ತಂಡ 2ನೇ ಅಲೆ ಕಳೆದ ಬಾರಿಗಿಂತ 4 ಪಟ್ಟು ಹೆಚ್ಚು ಪ್ರಖರತೆಯನ್ನು ಹೊಂದಿದ್ದು, ಸರ್ಕಾರಗಳು 2ನೇ ಅಲೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಎದುರಿಸಲು ಮುಂಚಿತವಾಗಿಯೇ ಅದನ್ನು ನಿಯಂತ್ರಿಸುವ ಕುರಿತು ಪೂರಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದರೂ ಸಹ ಸರ್ಕಾರ ನಿಷ್ಕ್ರೀಯ ಮನೋಭಾವನೆ ತಾಳಿದ್ದೇ ಇವತ್ತಿನ ಈ ಸ್ಥಿತಿಗೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಉಂಟಾಗಿರುವ ಆಕ್ಸಿಜನ್ ಹಾಗೂ ರೆಮಿಡಿಸಿಯರ್ ಇಂಜಕ್ಷನಗಳ ಕೊರತೆಗೆ, ಸೊಂಕಿತರ ಸಾವಿಗೂ ಸರ್ಕಾರಗಳೇ ನೇರ ಹೊಣೆ. ಇನ್ನೂ ನಾವು 3-4ನೇ ಅಲೆಯನ್ನು ಎದುರಿಸಬೇಕಾಗುತ್ತದೆ. ಆದರೆ ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಸಶಕ್ತಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಅದಕ್ಕೆ ಕಡಿವಾಣ ಹಾಕಬಹುದಾಗಿದೆ. ಅದೇ ಕಾರಣದಿಂದ ಮುಕ್ತವಾಗಿ ದೇಶದ ಎಲ್ಲ ಪ್ರಜೆಗಳಿಗೂ ಉಚಿತ ವಾಕ್ಸಿನ್ ನೀಡುವ ಕಾರ್ಯವನ್ನು ಮಾಡಬೇಕು. ಪ್ರತಿಯೊಬ್ಬ ಸೊಂಕಿತರು ಕೂಡಲೇ ಚಿಕಿತ್ಸೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಬೆಡ್ಗಳನ್ನು ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.