ಮಲ್ಟಿಫ್ಲೆಕ್ಸ್ಗಳ ವಿರುದ್ಧ ಹಾಗೋ ಹೀಗೋ ಹೋರಾಡಿ ಜೀವ ಹಿಡಿದುಕೊಂಡಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಸಂಪೂರ್ಣ ತಲೆಕೆಳಗಾಗಿವೆ. ರಾಜ್ಯದಲ್ಲಿ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಳೆದ ಒಂದು ವರ್ಷದಲ್ಲಿ ಬಾಗಿಲು ಮುಚ್ಚಿವೆ. ಇದೀಗ ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಹಾಕಿದೆ.
ಮೈಸೂರಿನ ಮಂಡಿ ಮೊಹಲ್ಲದಲ್ಲಿದ್ದ ‘ಶ್ರೀ ಟಾಕೀಸ್’ ಶಾಶ್ವತವಾಗಿ ಬಾಗಿಲು ಹಾಕಿದೆ. ಐದು ದಶಕಕ್ಕೂ ಹಳೆಯದಾದ ಈ ಚಿತ್ರಮಂದಿರ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತಾದ್ದರಿಂದ ಟಾಕೀಸ್ ಬಂದ್ ಮಾಡುವ ನಿರ್ಣಯವನ್ನು ಚಿತ್ರಮಂದಿರ ಮಾಲೀಕರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನ ಟಾಕೀಸ್ ಗಳಾದ ವಿದ್ಯಾರಣ್ಯ, ರತ್ನ, ಶಾಂತಲ, ಒಪೇರಾ, ರಣಜಿತ್, ಶಾಲೀಮಾರ್ ಥಿಯೇಟರ್ಗಳು ಈಗಾಗಲೇ ಬಾಗಿಲು ಹಾಕಿವೆ. ಇದೀಗ ಶ್ರೀ ಟಾಕೀಸ್ ಸಹ ಬಾಗಿಲು ಹಾಕಿದೆ.
ಬೆಂಗಳೂರಿನ ಬಳಿಕ ಕನ್ನಡ ಸಿನಿಮಾರಂಗಕ್ಕೆ ಹೆಚ್ಚು ಆದಾಯ ಬರುತ್ತಿದ್ದಿದ್ದೇ ಮೈಸೂರಿನಿಂದ. ಆದರೆ ಮೈಸೂರಿನಲ್ಲಿಯೇ ಸಾಲು-ಸಾಲಾಗಿ ಹಳೆಯ ಚಿತ್ರಮಂದಿರಗಳು ಬಾಗಿಲು ಹಾಕುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆತಂಕ ತರಬೇಕಾದ ಘಟನೆ.