ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಎಲ್ಲಿ ನೋಡಿದರು ಕೂಡ ಕೊರೊನಾ ರೋಗಿಗಳ ನರಳಾಟ ಕಂಡುಬರುತ್ತಿದೆ. ಈ ನಡುವೆ ಜನ ಆಸ್ಪತ್ರೆ, ಚಿತಾಗಾರ, ಪಿಎಚ್ಸಿ ಸೆಂಟರ್ ಗಳಲ್ಲಿ ಕ್ಯೂ ನಿಂತು ಪರದಾಡುವಂತ ಪರಿಸ್ಥಿತಿ ಬಂದಿದೆ.
ಕೊರೊನಾ ಸೋಂಕಿತರನ್ನು ಹೊತ್ತು ತರುವ ಅಂಬುಲೆನ್ಸ್ ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಕ್ಯೂ ನಿಂತರೆ, ಅಂತ್ಯಕ್ರಿಯೆಗಾಗಿ ಮೃತದೇಹಗಳನ್ನ ಹೊತ್ತು ಚಿತಾಗಾರಗಳ ಬಳಿ ಅಂಬುಲೆನ್ಸ್ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದೊದಗಿದೆ.
ಅಂಬುಲೆನ್ಸ್ ಕಥೆ ಈ ರೀತಿಯಾದರೆ ಜನ ಕೊರೊನಾದಿಂದಾಗಿ ಹಲವು ಬಗೆಯ ಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕೊರೊನಾದಿಂದ ಭಯಪಟ್ಟುಕೊಂಡಿರುವ ಜನ ಕೋವಿಡ್-19 ಟೆಸ್ಟ್ ಮಾಡಿಸುವುದಕ್ಕೆ ಅಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಅಲ್ಲಿ ಕೂಡ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಬಂದಿದೆ. ಬಿಟಿಎಂ ಲೇಔಟ್ನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೊರೊನಾ ಟೆಸ್ಟ್ ಗಾಗಿ ಸರದಿಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.
ಕೊರೊನಾ ಎರಡನೇ ಅಲೆ ಯುವಜನರಲ್ಲಿ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ವಿವಿಧ ಕಡೆಗಳಲ್ಲಿ ಕೊರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಟೆಸ್ಟ್ ಮಾಡಿಸಲು ಯುವಕ-ಯುವತಿಯರು ಸಾಲಾಗಿ ಟೆಸ್ಟ್ ಸೆಂಟರ್ ಕಡೆ ಮುಖಮಾಡಿದ್ದಾರೆ. ನಗರದ ಬಹುತೇಕ ಪಿಎಚ್ಸಿ ಸೆಂಟರ್ ಗಳ ಮುಂದೆ ಟೆಸ್ಟ್ ಗಾಗಿ ಕಾದು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.