ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 17 ಸಾವಿರ ಸೋಂಕು, 80 ಸಾವಿನೊಂದಿಗೆ ಇವತ್ತೂ ಮತ್ತೊಂದು ದಾಖಲೆ ಬರೆದಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಸದ್ಯದ ಪರಿಸ್ಥಿತಿ ರಣಭಯಂಕರವಾಗ್ತಿದೆ.
ಅಕ್ಷರಶಃ ಆಕ್ಸಿಜನ್ ‘ಯಮ’ರ್ಜೆನ್ಸಿ ಸೃಷ್ಟಿಯಾಗಿದೆ. ಪರದಾಡಿ, ಗೋಳಾಡಿ ಬೆಡ್ ಪಡೆದರೂ ಜನರ ಜೀವಕ್ಕೆ ಖಾತ್ರಿ ಇಲ್ಲ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಆಕ್ಸಿಜನ್ ಖಾಲಿಯಾಗಿದ್ರೆ, ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಇನ್ನೊಂದೆರಡು ದಿನಗಳಲ್ಲಿ `ಪ್ರಾಣವಾಯು’ ಕೊರತೆ ಎದುರಾಗಲಿದೆ. ಐಸಿಯುನಲ್ಲಿರೋ ರೋಗಿಗಳು `ದಯವಿಟ್ಟು ನಮಗೆ ಆಕ್ಸಿಜನ್ ಕೊಡಿಸಿ.. ಪ್ಲೀಸ್… ನಮ್ಮನ್ನು ಬದುಕಿಸಿ.. ಅಂತ ಗೋಳಾಡ್ತಿದ್ದಾರೆ.
ನಮ್ಮ ಕಣ್ಣೆದುರೇ ಪ್ರಾಣಗಳು ಹೋಗ್ತಿವೆ. ನಮಗೆ ನೋಡೋಕೇ ಆಗ್ತಿಲ್ಲ ಅಂತ ಕೊರೊನಾ ವಾರಿಯರ್ಸ್ ಕಂಬನಿ ಮಿಡಿತಿದ್ದಾರೆ. ಆದಷ್ಟು ಬೇಗ ಆಕ್ಸಿಜನ್ ಪೂರೈಸಿ ಅಂತ ಸರ್ಕಾರಕ್ಕೆ ಕೈ ಮುಗಿದು ಮನವಿ ಮಾಡಿದ್ದಾರೆ. ತುರ್ತಾಗಿ ಆಕ್ಸಿಜನ್ ಪೂರೈಸಿ, ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಕ್ಷಣಗಳು ದೂರ ಇಲ್ಲ ಅಂತ ಆರೋಗ್ಯ ಸಚಿವ ಸುಧಾಕರ್ಗೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಪತ್ರ ಬರೆದಿದ್ದಾರೆ.
ಬೊಮ್ಮಸಂದ್ರದಲ್ಲಿರುವ ಸ್ವಸ್ತಿಕ್ ಆಸ್ಪತ್ರೆಯಲ್ಲಿ 9 ಜನರಿಗೆ ಆಕ್ಸಿಜನ್ ಬೇಕು. ತುರ್ತಾಗಿ ಆಕ್ಸಿಜನ್ ಪೂರೈಸಿ. ಜೊತೆಗೆ 36 ಜನರಿಗೆ ಆಕ್ಸಿಜನ್ ಅವಶ್ಯಕತೆ ಇದೆ ಅಂತ ಡಾ. ವಿಜಯ ರಾಘವ್ ರೆಡ್ಡಿ ಮನವಿ ಮಾಡಿದ್ದಾರೆ. ಕಂದಾಯ ಸಚಿವ ಅಶೋಕ್ ಅವರು ಆಕ್ಸಿಜನ್ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಅಂದ್ರೆ, 7,500 ಆಕ್ಸಿಜನ್ ಸಿಲಿಂಡರ್ಗಳಿಗೆ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.