ವಿಜಯಪುರ : ನಗರದ ಆಶ್ರಮ ರಸ್ತೆಯ ಪಾನ್ಶಾಪ್ ಮುಂದೆ ನಿಂತು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿ, ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಆರಮ ರಸ್ತೆಯಲ್ಲಿನ ರಾಜು ಪಾನ್ಶಾಪ್ ಎದುರು ಕ್ರಿಕೆಟ್ ಬಟ್ಟಿಂಗ್ ನಡೆಯುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಕಾಳಿಕಾ ನಗರ ನಿವಾಸಿ ಸೋಮನಾಥ ಚನ್ನಪ್ಪ ಹಿರೊಳ್ಳಿ (28), ತೊರವಿ ನವರಸರಪುರ ನಿವಾಸಿ ಹಮೀದ್ ಬಾಬುಸಾಬ್ ಜಹಗೀರದಾರ (40) ಹಾಗೂ ಸಿಂದಗಿ ಮೂಲದ ಶರಣಪ್ಪ ಶಂಕ್ರಪ್ಪ ಜಹಾಗೀರದಾರ (40) ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಂಧಿತ ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರರಿಂದ ಎರಡು ಮೊಬೈಲ್ ಹಾಗೂ 39,300 ರೂ. ನಗದು ಹಣ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ, ಅನಿಲ ದೊಡಮನಿ, ರಾಜು ನಾಯಕ, ಎಂ.ಎಂ.ಅಂಬಿಗೇರ, ಐ.ಎ.ಕೋಟ್ಯಾಳ ಇವರು ಪಾಲ್ಗೊಂಡಿದ್ದರು.