ಕೋಲಾರ: ಪ್ರೀತಿಸಿ ಮದುವೆಯಾದ ಯುವಕನೊಬ್ಬ ಪತ್ನಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಆಡಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶೈಲ ಹಾಗೂ ಮುರುಗೇಶ್ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಇದೇ ಆಡಂಪಲ್ಲಿ ಗ್ರಾಮದ ಶೈಲ ಹಾಗೂ ಮುರುಗೇಶ್ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಶೈಲ ಆಗಿನ್ನು ಅಪ್ರಾಪ್ತಳಾಗಿದ್ದಳು. ಇದು ಶೈಲ ಕುಟುಂಬದವರಿಗೆ ತಿಳಿದು ಮುರುಗೇಶ್ ಮೇಲೆ ಅತ್ಯಾಚಾರ ಪ್ರಕರಣ ದೂರು ದಾಖಲಿಸಿದ್ದು, ಮುರುಗೇಶ್ ಜೈಲು ಸೇರಿದ್ದ. ಆರು ತಿಂಗಳು ಜೈಲುವಾಸ ಅನುಭವಿಸಿ ಮೂರು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರ ಬಂದಿದ್ದ.
ಜೈಲಿನಿಂದ ಹೊರ ಬಂದವನೇ 2 ಕುಟುಂಬದವರ ವಿರೋಧದ ನಡುವೆಯೂ ಶೈಲಾಳನ್ನು ಮದುವೆಯಾಗಿ ಊರಿನಿಂದಲೇ ದೂರ ಹೋಗಿದ್ದ. ಕಳೆದ ಮೂರು ತಿಂಗಳಿಂದ ಊರು ಬಿಟ್ಟು ಹೋಗಿದ್ದವರು ಊರಿಗೆ ಬಂದೇ ಇರಲಿಲ್ಲ. ಆದರೆ ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದಾಗ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಇದು ನಡೆದ ಸ್ವಲ್ಪ ಹೊತ್ತಿನಲ್ಲೇ ಶೈಲ ಹಾಗೂ ಮುರುಗೇಶ್ ಊರಿನ ಹೊರಗಡೆ ಬಂದು ಬುಧವಾರ ರಾತ್ರಿ ಮುರುಗೇಶ್, ಶೈಲಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಇದರಲ್ಲಿ ಸಾಕಷ್ಟು ಅನುಮಾನವಿದೆ, ಯುವಕನ ಕಡೆಯವರು ಕೊಲೆ ಮಾಡಿರಬಹುದು ಎಂಬುದು ಯುವತಿ ಶೈಲಾ ಸಂಬಂಧಿಕರ ಮಾತು.
ಇವರಿಬ್ಬರ ನಡುವೆ ನಡೆದ ಅತ್ಯಾಚಾರ ಪ್ರಕರಣ, ಜೈಲುವಾಸ, ಎರಡೂ ಕುಟುಂಬಗಳ ವಿರೋಧದ ನಡುವೆಯೂ ಮದುವೆ ಇದಾದ ನಂತರ ಆಗಾಗ ನಡೆಯುತ್ತಿದ್ದ ಶೈಲ ಹಾಗೂ ಮುರುಗೇಶ್ ಕುಟುಂಬಸ್ಥರ ನಡುವಿನ ಜಗಳ ಇದೆಲ್ಲವೂ ನಡೆಯುತ್ತಲೇ ಇತ್ತು. ಇದೆಲ್ಲದರ ನಡುವೆಯೂ ಶೈಲಾಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅವಳೊಂದಿಗೆ ಬಾಳಿ ಬದುಕಬೇಕು ಎಂದುಕೊಂಡು ಮದುವೆಯಾಗಿ ಹೋದ ಮುರುಗೇಶ್, ಮೂರು ತಿಂಗಳಿಂದ ಊರಿನತ್ತ ಸುಳಿದಿಲ್ಲ. ಅಲ್ಲಿ ಇಲ್ಲಿ ಊರು ಸುತ್ತಾಡಿಕೊಂಡೇ ಜೀವನ ನಡೆಸಿದ್ದ. ಆದರೆ ಯುಗಾದಿ ಹಬ್ಬ ಎಂದು ಊರಿಗೆ ಬರುಬೇಕು ಎಂದು ನಿರ್ಧಾರ ಮಾಡಿ ಊರಿಗೆ ಬಂದಿದ್ದರು.
ಆದರೆ ಅಷ್ಟರಲ್ಲಿ ಶೈಲ ಹಾಗೂ ಮುರುಗೇಶ್ ನಡುವೆ ಹಾಗೂ ಅವರ ಕುಟುಂಬಸ್ಥರ ನಡುವೆಯೂ ಏನು ಗಲಾಟೆ ಆಯ್ತೋ ಗೊತ್ತಿಲ್ಲ ಇಂಥಾದೊಂದು ದುರ್ಘಟನೆ ನಡೆದು ಹೋಗಿದೆ. ಮೇಲ್ನೋಟಕ್ಕೆ ಇಲ್ಲಿ ಮುರುಗೇಶ್ ಮನನೊಂದು ಶೈಲಾಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಶೈಲ ಕುಟುಂಬಸ್ಥರು ಮಾತ್ರ ಮುರುಗೇಶ್ ಕುಟುಂಬದವರೇ ಮದುವೆ ಇಷ್ಟವಿಲ್ಲದ ಕಾರಣಕ್ಕೆ ಇಬ್ಬರನ್ನು ಕೊಲೆ ಮಾಡಿರಬಹುದು ಎಂದು ಆರೋಪಿಸುತ್ತಿದ್ದಾರೆ. ಇತ್ತ ಯುವಕನ ಕಡೆಯವರು ಮಾತ್ರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಾರೆ. ಈ ಘಟನೆ ಬಗ್ಗೆ ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.