ಬೆಂಗಳೂರು : ವಿವಿಧ ಬೇಡಿಕೆಗಳು ಹಾಗೂ ಆರನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳ ಸಾರಿಗೆ ನೌಕರರು ಮುಂಜಾನೆಯಿಂದ ಬಸ್ಗಳನ್ನು ಡಿಪೋಗಳಿಂದ ಹೊರತೆಗೆಯದೇ ಪ್ರತಿಭಟನೆ ಮಾಡುತ್ತಿದ್ದು, ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.
ಸದಾ ಜನಜಂಗುಳಿಯಿಂದ ಜುನುಗುಡುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣದ ಬಸ್ಗಳಿಲ್ಲದೇ ಬಣಗುಡುತ್ತಿದೆ.
ಮುಂಜಾನೆ 5 ಗಂಟೆಯಿಂದ ಕೆಲ ಖಾಸಗಿ ಬಸ್ಗಳು ಮಾತ್ರ ಸಂಚಾರ ಆರಂಭಿಸಿವೆ. ಆದರೆ ಸಮರ್ಪಕ ಸೇವೆ ಸಿಗದೇ ಪ್ರಯಾಣಿಕರು ತೀವ್ರ ಬೇಸರವನ್ನು ಹೊರಹಾಕುತ್ತಿದ್ದಾರೆ.
ನೌಕರರು ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಬಸ್ಗಳು ಡಿಪೋಗಳಲ್ಲೇ ಇವೆ. ನಾವು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೇ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು 4 ಸಾರಿಗೆ ನಿಗಮಗಳ ನೌಕರರು ಹೇಳುತ್ತಿದ್ದು, ಅದರಂತೆ ಇಂದು ಬಸ್ ಗಳು ರಸ್ತೆಗಳಿಯದೇ ಬಿಕೋ ಎನ್ನುತ್ತಿದೆ. ಬನಶಂಕರಿ ಟಿಟಿಎಂಸಿ ಬಸ್ ನಿಲ್ದಾಣದ, ಯಶವಂತಪುರ ಟಿಟಿಎಂಸಿ ಸೇರಿದಂತೆ ಬೆಂಗಳೂರಿನ ಯಾವುದೇ ಡಿಪೋಗಳಿಂದ ಬಸ್ಗಳು ಸಂಚಾರ ಆರಂಭಿಸಿಲ್ಲ. ಇದರಿಂದ ವಿವಿಧ ಊರುಗಳಿಗೆ ತೆರಳಲು ಮುಂಜಾನೆ 4ಗಂಟೆಗೇ ಬಂದಿರುವ ನೂರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಜತೆಗೆ ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ಗಳಿಲ್ಲದೆ 20 ಲಕ್ಷ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ರಾಜ್ಯಾದ್ಯಂತ 1 ಕೋಟಿಗೂ ಅಧಿಕ ಜನರು ಬಸ್ಗಳಿಲ್ಲದೆ ಪ್ರಯಾಣಿಕರಲ್ಲಿ ಅವ್ಯವಸ್ಥೆ ಉಂಟಾಗಿದೆ.
ನೌಕರರು ಸಾರ್ವಜನಿಕರು ನಮ್ಮ ಹೋರಾಟವನ್ನು ಬೆಂಬಲಿಸಿ ನಿಮಗೆ ತೊಂದರೆಯಾಗುತ್ತಿರುವುದಕ್ಕೆ ಕ್ಷಮೆ ಕೇಳುತ್ತೇವೆ. ಆದರೆ ನಮ್ಮ ಸಮಸ್ಯೆಯನ್ನು ಪರಿಹರಿಸ ಬೇಕಾದ ಸರ್ಕಾರ ಮತ್ತು ಸಚಿವರಿಗೆ ನಿಮ್ಮ ಮತ್ತು ನಮ್ಮ ಕೂಗು ನೋವು ಕೇಳಿಸುತ್ತಿಲ್ಲ. ಈ ಕೂಗು ಅವರಿಗೆ ಮುಟ್ಟಬೇಕಾದರೆ ಈರೀತಿ ನಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪ್ರಯಾಣಿಕ ದೇವರಲ್ಲಿ ಮನವಿ ಮಾಡುತ್ತೇವೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ನೀಡಿರುವ ಸಂದೇಶದ ಅನ್ವಯ ಇಂದಿನಿಂದ ಸಾರಿಗೆಯ ನಾಲ್ಕೂ ನಿಗಮದ ಬಸ್ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಮಾಡಲಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ನೌಕರರು ಸರ್ಕಾರಕ್ಕೆ ರವಾನಿಸಿದ್ದಾರೆ.
ಇತ್ತ ಸರ್ಕಾರ ಸಾರ್ವಜನಿಕರ ಪರದಾಟಕ್ಕೆ ಸ್ಪಂದಿಸುತ್ತಿಲ್ಲ. ಅಲ್ಲದೆ ಹಸುಗೂಸಿನೊಂದಿಗೆ ಬಸ್ ಇಲ್ಲದ ಕಾರಣ ಕೆಂಪೇಗೌಡ ನಿಲ್ದಾಣದಿಂದ ಬನಶಂಕರಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಇನ್ನು ರಜೆ ಇಲ್ಲದ ಕಾರಣ ಸರ್ಕಾರಿ ನೌಕರರ ಕೂಡ ಬಸ್ ಇಲ್ಲದೆ ಪರದಾಡುವಂತಾಗಿದೆ.