ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಳ್ಳೂರು ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಶುರುವಾಗಿದೆ. ಸತೀಶ್ ಜಾರಕಿಹೊಳಿ ಮತಯಾಚನೆ ಕೈಗೊಂಡಿದ್ದಾರೆ. ಮರಾಠಾ ಸಮುದಾಯ ಓಲೈಕೆಗೆ ಕಾಂಗ್ರೆಸ್ ಕಸರತ್ತು ಮಾಡಿದ್ದು ಕೇಸರಿ ಪೇಟ ಧರಿಸಿ ಸತೀಶ್ ಜಾರಕಿಹೊಳಿ ಮತಯಾಚನೆ ಕೈಗೊಂಡಿದ್ದಾರೆ.
ಮರಾಠಿ ಭಾಷಿಗರೇ ಹೆಚ್ಚಾಗಿರುವ ಯಳ್ಳೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಮತ ಪ್ರಚಾರದಲ್ಲಿ ಸತೀಶ್ ಜಾರಕಿಹೊಳಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಜೊತೆಗೆ ಸಿಲೆಂಡರ್ ಗ್ಯಾಸ್ ಬೆಲೆ ಏರಿಕೆ ತಡೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಸರ್ಕಾರ ಬೇಕು. ಯಾವುದೇ ಅದಾನಿಗಾಗಲಿ, ಅಂಬಾನಿಗಾಗಲಿ ಸರ್ಕಾರ ಇರಬಾರದು. ದೆಹಲಿ ಸರ್ಕಾರ ಕೇವಲ ಎರಡ್ಮೂರು ಜನರಿಗಾಗಿ ನಡೆಯುತ್ತಿದೆ. ಇದನ್ನ ತಡೆಯಲು ಈ ಚುನಾವಣೆ ಮೂಲಕ ಸರ್ಕಾರಕ್ಕೆ ಉತ್ತರಿಸಬೇಕು ಎಂದು ಮಾತನಾಡಿದ್ದಾರೆ.
ಜನವಿರೋಧಿ ನೀತಿ ಅನುಸರಿಸದರೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂಬ ಸಂದೇಶ ಸಾರಬೇಕಿದೆ. ಒಂದು ಮತವೂ ಬಹಳ ಬೆಲೆಯುಳ್ಳದ್ದು. ಯಾವುದೇ ಸರ್ಕಾರ ಬೀಳಿಸುವ ಅಥವಾ ಆರಿಸಿ ತರುವ ಶಕ್ತಿ ಒಂದು ಮತಕ್ಕಿದೆ. ಜನರ ಕಷ್ಟವನ್ನು ಆಲಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿ ಈವರೆಗೂ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಸೆಲೆಬ್ರಿಟಿಗಳ ಬರ್ತ್ ಡೇಗೆ ವಿಶ್ ಮಾಡಲು ಸಮಯ ಇದೆ. ಆದರೆ ರೈತರಿಗಾಗಿ ಪ್ರಧಾನಿ ಮೋದಿ ಬಳಿ ಸಮಯ ಇಲ್ಲ. ಯಾರು ಕೆಲಸ ಮಾಡುತ್ತಾರೋ ಅವರ ಕೈಗೆ ಅಧಿಕಾರ ಬೇಕು. ಕೇವಲ ಭಾಷಣ, ರಾಮ ಮಂದಿರದಿಂದ ರಾಮರಾಜ್ಯ ಆಗಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.