ಮೈಸೂರು: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಅದರಲ್ಲಿ 5 ವರ್ಷದ ಮಗುವು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಳ್ಳೂರು ಸಮೀಪದ ಅಗಚನಹಳ್ಳಿಯಲ್ಲಿ ನಡೆದಿದೆ.
ತನ್ವೀತ್ ಎಂಬ ಪುಟ್ಟ ಬಾಲಕ ಹಾಗೂ ದೀಪಕ್ ಎಂಬಾತ ಸಾವನ್ನಪ್ಪಿರುವವರು. ಭರತ್ ಎಂಬಾತ ಕಳಸದಿಂದ ಬಂದು ಮೈಸೂರಿನಲ್ಲಿ ವಾಸವಾಗಿದ್ದ. ಇಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದನಂತೆ. ಆತನಿಗೆ ಒಬ್ಬ ಮಗ ಕೂಡ ಇದ್ದ. ಕಳೆದ ರಾತ್ರಿ ಇದ್ದಕ್ಕಿದ್ದ ಹಾಗೇ ಎಣ್ಣೆ ಪಾರ್ಟಿ ಆಯೋಜನೆ ಮಾಡಿ, ಸ್ನೇಹಿತರನ್ನು ಕರೆದಿದ್ದ. ಎಣ್ಣೆ ಪಾರ್ಟಿ ಮುಗಿದ ಮೇಲೆ ಭರತ್, ಪುಟ್ಟ ಬಾಲಕ ಹಾಗೂ ದೀಪಕ್ ಎಂಬಾತನನ್ನು ಮನೆಯೊಳಗೆ ಬಿಟ್ಟು ಸ್ನೇಹಿತನೊಬ್ಬ ಬೀಗ ಹಾಕಿಕೊಂಡು ಹೋಗಿದ್ದನಂತೆ.
ಇದ್ದಕ್ಕಿದ್ದ ಹಾಗೇ ಆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತಂತೆ. ಬೆಂಕಿ ಹೆಚ್ಚು ಹೊತ್ತಿಕೊಂಡಿದ್ದು, ಅಕ್ಕಪಕ್ಕದವರ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಬೆಂಕಿ ನಂದಿಸಲಾಗಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ದೀಪಕ್ ಹಾಗೂ ತನ್ವೀತ್ ಸಾವನ್ನಪ್ಪಿದ್ದಾರೆ. ಭರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಮನೆಯಲ್ಲಿ ಹುಡುಕಾಡಿದಾಗ ಪೆಟ್ರೋಲ್ ವಾಸನೆ ಬರಯತ್ತಿದ್ದದ್ದು ತಿಳಿದು ಬಂದಿದೆ. ಹೀಗಾಗಿ ಯಾರಾದರೂ ಪೆಟ್ರೋಲ್ ಹಾಕಿ, ಮನೆಗೆ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.