ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಪ್ರಚಾರದ ಕಾರ್ಯ ಜೋರಾಗಿದೆ. ಲಕ್ಷಾಂತರ ಜನ ಪ್ರಚಾರದಲ್ಲಿ ತೋಡಗಿದ್ದಾರೆ. ಗುಂಪು ಗುಂಪಾಗಿ ತಿರುಗಾಡುತ್ತಿದ್ದಾರೆ. ಇವರಿಗೆ ಬರದ ಕೊರೊನಾ ಬಸ್ ನಲ್ಲಿ ಪ್ರಯಾಣಿಸುವವರಿಗೆ, ಚಿತ್ರ ಮಂದಿರದಲ್ಲಿ ಸಿನಿಮಾ ನೋಡುವವರಿಗೆ ಜೀಮ್ ನಲ್ಲಿ ವರ್ಕ್ ಔಟ್ ಮಾಡುವವರಿಗೆ ವಕ್ಕರಿಸಿಕೊಳ್ಳುವುದಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ವ್ಯಾಕ್ಸಿನ್ ಹೆಸರಿನಲ್ಲಿ ನಡೆದ ಗೊಲ್ ಮಾಲ್ ಮರೆಮಾಚಲು ಈ ರೀತಿ ಜನ ಸಾಮಾನ್ಯರ ಧಿಕ್ಕು ತಪ್ಪಿಸುವ ಕುತಂತ್ರ ಮಾಡಲಾಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಹಿತ ಕಾಯುವುದೇ ಸರ್ಕಾರದ ನಡೆಯಾದ್ರೆ ಎಲ್ಲರಿಗೂ ರೂಲ್ಸ್ ಅನ್ವಯಿಸಬೇಕು ಆದ್ರೆ ಸದ್ಯ ಆಗುತ್ತಿರುವುದೇನು? ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಕೊರೊನಾ ವೈರಸ್ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಏಪ್ರಿಲ್ 2 ರಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತು. ಹೊಸ ಮಾರ್ಗಸೂಚಿ ಅನ್ವಯ, ಚಿತ್ರಮಂದಿರಗಳಲ್ಲಿ 50% ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರ ಏಕಾಏಕಿಯಾಗಿ ಈ ನಿರ್ಧಾರವನ್ನು ಪ್ರಕಟಿಸಿರುವುದು ಸ್ಯಾಂಡಲ್ ವುಡ್ ಗೆ ಬೇಸರ ತಂದಿದೆ. ಅದರಲ್ಲೂ ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ ಚಿತ್ರತಂಡಕ್ಕೆ ಆಘಾತ ಉಂಟು ಮಾಡಿದೆ.
ಹೊಸ ರೂಲ್ಸ್ ಜಾರಿಗೊಳ್ಳುತ್ತಿದ್ದಂತೆ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಫೇಸ್ ಬುಕ್ ಲೈವ್ ಗೆ ಬಂದು “ದಿಢೀರ್ ಅಂತ 50% ಆಸನ ಭರ್ತಿಗೆ ಅವಕಾಶ ನೀಡಿರುವುದು ಸರಿ ಅಲ್ಲ” ಎಂದು ಹೇಳಿದ್ದರು.
‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಕೂಡ ಇದೇ ವಿಷಯದ ಕುರಿತಾಗಿ ಟ್ವೀಟ್ ಮಾಡಿದ್ದಾರೆ. “50% ಆಸನ ಭರ್ತಿಗೆ ವಾಪಸ್ ಹೋಗಿರುವುದು ಈಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಆಘಾತಕಾರಿ. ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಪರಿಸ್ಥಿತಿಯನ್ನು ಎದುರಿಸಲು ‘ಯುವರತ್ನ’ ತಂಡಕ್ಕೆ ಶಕ್ತಿ ಸಿಗಲಿ ಮತ್ತು ಇದರಿಂದ ‘ಯುವರತ್ನ’ ತಂಡ ವಿಜಯಶಾಲಿಯಾಗಿ ಹೊರಬರಲಿ ಎಂದು ನಾನು ಹಾರೈಸುತ್ತೇನೆ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಚಿತ್ರಸಾಹಿತಿ ಮತ್ತು ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್, “ಪ್ರೇಕ್ಷಕರ ಸಂಖ್ಯೆ 50% ಬದಲು 80% ಮಾಡಿ. ಚಿತ್ರೋದ್ಯಮ ಉಳಿಸಿ. ನಿರ್ಮಾಪಕರು ಉಳಿದರೆ ಮಾತ್ರ ತಂತ್ರಜ್ಞರು, ಕಾರ್ಮಿಕರು ಉಳಿಯುವುದು. ನಮ್ಮನ್ನು ಉಳಿಸಿ. ಕೊರೊನಾದಿಂದ ಸಾಯಬಹುದು. ಹಸಿವು ಮತ್ತು ಅಸಹಾಯಕತೆಯಿಂದಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಚಿತ್ರೋದ್ಯಮ ಬೆಂಬಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಕೊರೊನಾ ಮಾರ್ಗಸೂಚಿ ಸಂಪೂರ್ಣ ವಿಫಲ. ಥಿಯೇಟರ್ ನವರು ಅರ್ಧ ನಡೆಸಿದರೆ, ಅರ್ಧ ಟ್ಯಾಕ್ಸ್ ತಗೊತಾರಾ? ಮಾಡಿದ್ರೆ ಚುನಾವಣೆ ಸೇರಿ ಎಲ್ಲದಕ್ಕೂ ನಿಯಮ ಮಾಡಿ. ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಕಂಡು ಕೋವಿಡ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿನಿಮಾ ಕ್ಷೇತ್ರಕ್ಕೆ ಯಾವುದೇ ವಿನಾಯಿತಿ ಇಲ್ಲ. ಯಾವುದೇ ಕ್ಷೇತ್ರದ ಮೇಲೆ ನಿರ್ಬಂಧ ಹೇರಲು ಸರ್ಕಾರಕ್ಕೂ ಇಷ್ಟವಿಲ್ಲ. ಅನಿವಾರ್ಯವಾಗಿ ಮಾರ್ಗಸೂಚಿ ಪಾಲನೆ ಮಾಡಲೇಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.