ಚಿತ್ರದುರ್ಗ,ಮಾ.30(ಹಿ.ಸ) : ಕೋರೋನಾ ವಾರಿಯರ್ಸ್ ಆಗಿ ಕಳೆದ ಆರು ತಿಂಗಳಿಂದ ದುಡಿದ ನೂರಾರು ಸಿಬ್ಬಂದಿಗಳನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದು, ಇದೀಗ ಪ್ರಾಣದ ಹಂಗೂ ತೊರೆದು ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಇತ್ತ ವೇತನವೂ ಇಲ್ಲದೆ ಕೆಲಸವೂ ಇಲ್ಲದೆ ಕಂಗಾಲಾಗಿದ್ದಾರೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಕೋರೋನಾ ಹಿನ್ನೆಲೆಯಲ್ಲಿ ಲ್ಯಾಬ್ ಟೆಕ್ನಿಷಿಯನ್, ಶ್ರುಶ್ರೂಕಿಯರು, ಡಿ ಗ್ರೂಪ್ ನೌಕರರನ್ನು ಗುತ್ತಿಗೆ/ಹೊರ ಗುತ್ತಿಗೆ ಮೂಲಕ ಸರ್ಕಾರದ ಅದೇಶದಂತೆ ಆಯಾ ಕೆಲಸಕ್ಕೆ ತಕ್ಕಂತೆ ವೇತನ ನಿಗಧಿಪಡಿಸಿ ಅದರಂತೆ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಇದರಂತೆ ಕೆಲಸಕ್ಕೆ ಹಾಜರಾಗಿದ್ದವರನ್ನು ನಾಲ್ಕು ಬ್ಯಾಚ್ ಗಳ ಮೂಲಕ ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿತ್ತು.
ಈನಾಲ್ಕು ಬ್ಯಾಚ್ ಗಳಲ್ಲಿ ಕೋರೋನಾ ವಾರಿಯರ್ಸ್ ಆಗಿ ಸೇವೆಗೆ ಸೇರಿದ ಕೆಲವರಿಗೆ ಮೊದಲ ಮೂರು ತಿಂಗಳು ವೇತನ ನೀಡಿಲ್ಲ. ಇನ್ನು ಕೆಲವರಿಗೆ 25 ಸಾವಿರ ವೇತನ ನಿಗಧಿ ಮಾಡಿ, ಕೇವಲ 12 ಸಾವಿರ ಮಾತ್ರ ನೀಡಿದ್ದಾರೆ. ಇದರ ಬಗ್ಗೆ ಕೇಳಿದರೆ ನಾವು ಅಷ್ಟೆ ಕೊಡೋದು ನೀವೆಲ್ಲರೂ ಹೊರ ಗುತ್ತಿಗೆ ಮೂಲಕ ಬಂದಿದ್ದೀರಾ ನಾಳೆಯಿಂದ ನೀವು ಕೆಲಸಕ್ಕೆ ಬರುವುದು ಬೇಡ ಕರೋನಾ ಸೋಂಕಿತರ ಸಂಖ್ಯೆ ಚಿತ್ರದುರ್ಗದಲ್ಲಿ ಕಡಿಮೆ ಆಗುತ್ತಿದ್ದು ನಿಮ್ಮನ್ನು ಮಾರ್ಚ್ 31 ಕ್ಕೆ ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಎಂದು ಹೇಳುತ್ತಿದ್ದಾರೆ. ಆದರೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮೂಲಕ ಕೋರೋನಾ ವಾರಿಯರ್ಸ್ ಗಳನ್ನು ಇನ್ನು ಆರು ತಿಂಗಳು ಕಾಲ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಆದರೆ ಅವರ ಅದೇಶವನ್ನು ಕೂಡ ಗಾಳಿಗೆ ತೂರಲಾಗುತ್ತಿದೆ. ಇತ್ತ ವೇನವೂ ಇಲ್ಲ. ಕೆಲಸವೂ ಇಲ್ಲದಂತಾಗುತ್ತಿದ್ದು, ಪ್ರಾಣದ ಹಂಗೂ ತೊರೆದು ಕೆಲಸ ಮಾಡಿರುವ ನಮ್ಮನ್ನು ಮುಂದುವರೆಸುವಂತೆಯೂ ಸಕಾಲಕ್ಕೆ ನಿಗಧಿಪಡಿಸಿರುವ ವೇತನವನ್ನು ಪಾವತಿ ಮಾಡುವಂತೆಯೂ ಮನವಿಯನ್ನು ಮಾಡಿದ್ದಾರೆ.