ಮಂಗಳೂರು, ಮಾರ್ಚ್ 31: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆಂದು ದಾಖಲಾದ ಮಹಿಳೆ ಮೇಲೆ ವೈದ್ಯರೊಬ್ಬರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದ.ಕ ಜಿಲ್ಲೆಯ ಯೆಯ್ಯಾಡಿಯ ವಸಂತಿ ಎಂಬವರನ್ನು ಅಪೆಂಡಿಕ್ಸ್ ಆಗಿರುವ ಕಾರಣಕ್ಕೆ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅನಂತರ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಬಳಿಕ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಇದರಿಂದಾಗಿ ಮಹಿಳೆಯ ಮಕ್ಕಳು ಮಂಗಳವಾರ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದು, ವೈದ್ಯರಲ್ಲಿ ತಪಾಸಣೆಗೆ ತೋರಿಸಿದ್ದಾರೆ. ಈ ಸಂದರ್ಭ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಇರಲಿಲ್ಲ. ಡ್ಯೂಟಿ ಡಾಕ್ಟರೊಬ್ಬರು ಊಟ ಮಾಡಲು ಕಷ್ಟವಾಗುವುದಾದರೆ ಟ್ಯೂಬ್ ಮೂಲಕ ಜ್ಯೂಸ್ ನೀಡಿ ಎಂದು ಹೇಳಿ ಬಾಯಿಗೆ ಟ್ಯೂಬ್ ಹಾಕಿದ್ದಾರೆ.
ಇದಕ್ಕೆ ವಸಂತಿ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಟ್ಟಿಗೆದ್ದ ವೈದ್ಯರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಬಳಿಕ ವೈದ್ಯರು ಮಹಿಳೆಯ ಬಳಿ ಕ್ಷಮೆ ಕೇಳಿದ ಕಾರಣ, ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ.