ಬೆಳಗಾವಿ: ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೆಂಪಲ್ ರನ್ ಶುರು ಮಾಡಿದ್ದು, ಮಹಾರಾಷ್ಟ್ರದ ಕೋಲ್ಹಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ಸಂತ್ರಸ್ತ ಯುವತಿ ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಇದರಿಂದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದು, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಇಂದು ಸಂಬಂಧಿಕರ ಮನೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಬೆಳಗಿನ ಜಾವ 3 ಗಂಟೆಗೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಗೋಕಾಕ್ಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ, ಬೆಳಗ್ಗೆಯಿಂದ ಗೋಕಾಕ್ ನಿವಾಸದಲ್ಲೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ಮಾಧ್ಯಮದವರ ಕಣ್ತಪ್ಪಿಸಿ ಗೋಕಾಕ್ ನಿವಾಸದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ.ಸಿಡಿ ಲೇಡಿಯಿಂದ ಸೆಕ್ಷನ್ 164 ಅಡಿ ಸ್ವ ಇಚ್ಛಾ ಹೇಳಿಕೆ ದಾಖಲಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಪರ ವಕೀಲರು ಅಲರ್ಟ್ ಆಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವ ಸಂಬಂಧ ಪ್ರಕ್ರಿಯೆ ಮುಂದುವರೆಸುವ ಸಾಧ್ಯತೆ ಇದೆ. ಇಂದು ರಾತ್ರಿ ಬಾಲಚಂದ್ರ ಜಾರಕಿಹೊಳಿ ಜೊತೆ ವಕೀಲರು ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಿದ್ದು, ರಮೇಶ್ ಜಾರಕಿಹೊಳಿ ಜತೆಗೂ ದೂರವಾಣಿ ಮೂಲಕ ವಕೀಲರು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.