ಬೆಳಗಾವಿ : “ಬಿಜೆಪಿಯಿಂದ ಸುರೇಶ ಅಂಗಡಿ ಕುಟುಂಬದ ಯಾರಿಗೇ ಟಿಕೆಟ್ ನೀಡಲಿ, ನಾನು ಅವರ ಪರವಾಗಿ ಕ್ಷೇತ್ರದಲ್ಲೆಲ್ಲ ಸುತ್ತಾಡಿ ಪ್ರಚಾರ ಮಾಡುತ್ತೇನೆ. ನನ್ನ ಮಗನ ಚುನಾವಣೆಗೆ ಕೆಲಸ ಮಾಡಿದ ರೀತಿಯಲ್ಲೇ ಮಾಡುತ್ತೇನೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಏನ್ ಮಾಡುತ್ತೋ ಮಾಡ್ಕೊಳ್ಳಿ ನೋಡೋಣ” ಎಂದು ಸವಾಲೆಸೆದಿದ್ದ ಮಾಜಿ ಸಂಸದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಇದೀಗ ಮಂಗಲಾ ಅಂಗಡಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈಗ ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ನಾಮಪತ್ರ ಸಲ್ಲಿಕೆ ಮುಗಿಯಲಿ. ನಂತರ ಹೇಳುತ್ತೇನೆ ಎಂದು ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.
ಆಗ ನಾನು ಹೇಳಿದ್ದು ನಿಜ. ಈಗಷ್ಟೆ ಟಿಕೆಟ್ ಘೋಷಣೆಯಾಗಿದೆ. ನನ್ನ ನಿರ್ಧಾರವನ್ನು ತರಾತುರಿಯಲ್ಲಿ ಪ್ರಕಟಿಸುವ ಅಗತ್ಯವಿಲ್ಲ. ಇನ್ನೂ ಸಮಯವಿದೆ. ಮುಂದೆ ಹೇಳುತ್ತೇನೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಸಲು ನನ್ನ ಹೆಸರನ್ನೇ ಹೈಕಮಾಂಡ್ ಗೆ ಕಳಿಸಲಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.