ಬೆಂಗಳೂರು : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇಂದು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿದೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಏರ್ಪಡಿಸಲಾಗಿರುವ ಔತಣಕೂಟದಲ್ಲಿ ಕೈ ಶಾಸಕರು, ಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದರು. ಕಾಂಗ್ರೆಸ್ ಮುಖಂಡರ ಜೊತೆ ನಡೆದ ಭೋಜನಕೂಟದ ಸಮಯದಲ್ಲಿ ಕಲಾಪದ ಬಗ್ಗೆ ಚರ್ಚೆ ನಡೆಯಿತು.
ಅಹೋರಾತ್ರಿ ಧರಣಿ ಬಗ್ಗೆ ಗಂಭೀರ ಚರ್ಚೆ : ಇಂದು ಅಹೋರಾತ್ರಿ ಧರಣಿ ಮಾಡಬೇಕೋ, ಬೇಡವೋ ಎಂಬ ಚರ್ಚೆ ನಡೆಯಿತು. ಇಂದು ಅಹೋರಾತ್ರಿ ಧರಣಿ ಮಾಡಬೇಕು ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಮುಖವಾಗಿ ಇದೇ ವಿಚಾರವನ್ನು ಚರ್ಚೆಗೆ ತೆಗೆದುಕೊಂಡರು.
ಅಧಿವೇಶನ ಮುಗಿದರೆ ಧರಣಿ ಬೇಡ : ಇದೇ ಸಂದರ್ಭ ಸಿದ್ದರಾಮಯ್ಯ ಮಾತನಾಡಿ, ಇವತ್ತು ಅಧಿವೇಶನ ಅಂತ್ಯ ಆಗುತ್ತದೆ. ಅಂತ್ಯವಾದ್ರೆ, ಹೇಗೆ ಅಹೋ ರಾತ್ರಿ ಧರಣಿ ಮಾಡುವುದು? ಈಗಾಗಲೇ ಎಲ್ಲಾ ವಿಧೇಯಕಗಳು ಮಂಡನೆ ಆಗಿವೆ. ವಿಧೇಯಕಗಳು ಅಂಗೀಕಾರ ಆಗಿವೆ.
ಹಾಗಾಗಿ, ಇಂದು ನಾಲ್ಕು ಗಂಟೆಯೊಳಗೆ ಅಧಿವೇಶನ ಅಂತ್ಯ ಆಗುತ್ತದೆ. ಅಂತ್ಯ ಮಾಡಿದ್ರೆ, ಅಹೋರಾತ್ರಿ ಧರಣಿ ಮಾಡಿದ್ರೆ ಪ್ರಯೋಜನವಿಲ್ಲ. ಎಲ್ಲರೂ ಕ್ಷೇತ್ರಗಳಿಗೆ ಹೋಗಬೇಕು. ಬೈ ಎಲೆಕ್ಷನ್ ಬೇರೆ ಇದೆ. ಅಲ್ಲಿಗೆ ಹೋಗಬೇಕು. ಒಂದು ವೇಳೆ ಅಧಿವೇಶನ ಮುಂದುವರಿದ್ರೆ ಅಹೋರಾತ್ರಿ ಧರಣಿ ಮಾಡೋಣ ಎಂದಿದ್ದಾರೆ.