ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಬಹಿರಂಗವಾದ ಬಂದ ಬಳಿಕ 20 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಿಂಗ್ಪಿನ್ಗಳು ಗೌಪ್ಯ ಸಂವಹನಕ್ಕೆ ‘ಸಿಗ್ನಲ್’ ಆಯಪ್ ಮೆಸೆಂಜರ್ ಬಳಸುತ್ತಿದ್ದಾರೆ ಎಂಬ ಸಂಗತಿ ವಿಶೇಷ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಡಿ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರು ಮತ್ತು ವಿವಾದಿತ ಯುವತಿ ಎಸ್ಐಟಿ ಗಾಳಕ್ಕೆ ಸಿಲುಕದಂತೆ ಹೊರ ರಾಜ್ಯಗಳಲ್ಲಿ ಭೂಗತವಾಗಿದ್ದಾರೆ. ಈ ಪ್ರಕರಣದ ಸಂಬಂಧ ಎಸ್ಐಟಿ ತನಿಖೆ ಸೇರಿದಂತೆ ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಹಾಗೂ ಹೊರ ರಾಜ್ಯಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳ ಪಡೆಯುವ ಸಲುವಾಗಿ ಮಾತುಕತೆಗೆ ಅವರು ‘ಸಿಗ್ನಲ್’ ಆಯಪ್ ಬಳಸುತ್ತಿದ್ದಾರೆ.
ಮೊಬೈಲ್ ಕರೆಗಳು ಹಾಗೂ ವಾಟ್ಸ್ಆಯಪ್ ಬಳಸಿದರೆ ಪೊಲೀಸರಿಗೆ ತಮ್ಮ ಇರುವಿಕೆಯ ಸ್ಥಳದ ಜಾಡು ಸಿಗುತ್ತದೆ ಎಂದು ಎಚ್ಚರಿಕೆವಹಿಸಿರುವ ಸಿಡಿ ಸ್ಫೋಟದ ಗುಂಪು, ತನಿಖಾ ತಂಡಗಳಿಗೆ ಸಿಗ್ನಲ್ ಆಯಪ್ ಬಳಸುವ ಮೂಲಕ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದಹಾಗೇ ಸಿಗ್ನಲ್ ಆಯಪ್ 50 ಮಿಲಿಯನ್ ಡೌನ್ಲೋಡ್ಗಳನ್ನು ಗೂಗಲ್ ಪ್ಲೆ ಸ್ಟೋರ್ನಲ್ಲಿ ಕಂಡಿದೆ. ಸಂದೇಶಗಳ ಸುರಕ್ಷತೆಗೆ ಮೊದಲ ಪ್ರಾಧಾನ್ಯತೆ ಎಂದು ಈ ಆಯಪ್ ಹೇಳಿಕೊಂಡಿದೆ.