ಬೆಂಗಳೂರು, ಮಾ.23- ಸಿಡಿ ಹೆಸರು ಹೇಳಬೇಡಿ, ಈ ಸರ್ಕಾರದಲ್ಲಿನ ಸಚಿವರು ಬೆಚ್ಚಿ ಬೀಳುತ್ತಾರೆ ಎಂದು ಪ್ರತಿಪಕ್ಷದ ಸದಸ್ಯರು ಲೇವಡಿ ಮಾಡಿದ ಪ್ರಸಂಗ ವಿಧಾನಪರಿಷತ್ನಲ್ಲಿಂದು ನಡೆಯಿತು. ಶೂನ್ಯ ವೇಳೆಯಲ್ಲಿ ಸದಸ್ಯ ಶ್ರೀಕಾಂತ್ ಗೊಟ್ನೇಕರ್ ಅವರು ವಿಷಯ ಪ್ರಸ್ತಾಪಿಸುತ್ತ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೀದರ್ನಲ್ಲಿ ಮುಖ್ಯಮಂತ್ರಿ ಭಾಷಣ ಮಾಡುವ ವೇಳೆ ಮರಾಠಿಗರಿಗೆ 3ಬಿ ಯಿಂದ 2ಬಿಗೆ ಮೀಸಲಾತಿ ಬದಲಾವಣೆ ಮಾಡುವ ಭರವಸೆ ನೀಡಿದ್ದರು. ಸಿಎಂ ಭಾಷಣದ ಸಿಡಿ ನನ್ನ ಬಳಿ ಇದೆ ಎಂದು ಹೇಳಿದರು.
ಆಗ ಪ್ರತಿಪಕ್ಷದ ಸದಸ್ಯರಾದ ನಾರಾಯಣಸ್ವಾಮಿ ಹಾಗೂ ಇತರರು ಸಿಡಿ ಎಂದು ಹೇಳಬೇಡಿ, ಈ ಸರ್ಕಾರದ ಸಚಿವರು ಬೆಚ್ಚಿ ಬೀಳುತ್ತಾರೆ. ಯಾವ ಸಿಡಿ ಎಂದು ಸ್ಪಷ್ಟವಾಗಿ ಹೇಳಿ ಎಂದರು. ಸಿಎಂ ಭಾಷಣ ಮಾಡಿದ ಸಿಡಿ ಮಾತ್ರ ನನ್ನ ಬಳಿ ಇದೆ ಎಂದು ಶ್ರೀಕಾಂತ್ ಗೊಟ್ನೇಕರ್ ಹೇಳಿ ಸಮಾಧಾನಪಡಿಸಿದರು.