ಬೆಂಗಳೂರು,ಮಾ.21- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ನನ್ನನ್ನೂ ಸೇರಿದಂತೆ ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ನಲ್ಲಿ ಮಾಜಿ ಸಚಿವ ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ 1ರಂದು ಪ್ರಮುಖರನ್ನು ಕೊಲೆ ಮಾಡುವ ಪತ್ರ ಬಂದಿದೆ. ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.
ಸಿ.ಟಿ.ರವಿ, ಖಾಸಗಿ ಚಾನೆಲ್ನ ಸಂಪಾದಕ ರಂಗಣ್ಣ , ನಟ ಶಿವರಾಜ್ಕುಮಾರ್ ಹಾಗೂ ತಮ್ಮನ್ನು ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬೆದರಿಸಲಾಗಿದೆ. ಕೊಲೆ ಮಾಡುವವರು ಎಲ್ಲಿ ಬೇಕಾದರೂ ಕೊಲೆ ಮಾಡಬಹುದು. ಆದರೆ ನಾನು ಹೆದರುವುದಿಲ್ಲ. ಹಾಗಾಗಿ ಅಭಿನಂದನಾ ಸಮಾರಂಭಕ್ಕೆ ಬಂದಿದ್ದೇನೆ ಎಂದರು.
ಸಿ.ಟಿ.ರವಿ ಅವರನ್ನು ಕೊಲೆ ಮಾಡಿದರೆ ನಾನು ಉಳಿಯುತ್ತೇನೆ. ನನ್ನನ್ನು ಕೊಲೆ ಮಾಡಿದರೆ ಸಿ.ಟಿ.ರವಿ ಉಳಿಯುತ್ತಾರೆ. ಈ ರೀತಿಯ ಗೊಂದಲದ ಸಂದೇಶವನ್ನು ಆ ಪತ್ರ ಸೃಷ್ಟಿಸಿದೆ ಎಂದು ತಿಳಿಸಿದರು.