ಕಲಬುರಗಿ: ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ ನಂತರ ಹಾಗೂ ಕೊರೊನಾ ಸೋಂಕಿನ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ನನ್ನ ಸಿನಿಮಾವೊಂದರ ಶೂಟಿಂಗ್ ಮಾಡಲಾಗುವುದು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಘೋಷಿಸಿದರು.
‘ಯುವರತ್ನ’ ಚಿತ್ರದ ಪ್ರಚಾರಕ್ಕಾಗಿ ರವಿವಾರ ನಗರಕ್ಕೆ ಆಗಮಿಸಿದ್ದ ಅವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಯಾವ ಸಿನಿಮಾದ ಶೂಟಿಂಗ್ ಎಂಬುದನ್ನು ಸದ್ಯದಲ್ಲೇ ಬಹಿರಂಗ ಪಡಿಸಲಿದ್ದೇವೆ ಎಂದು ಹೇಳಿದರು.
ಕಲಬುರಗಿ ನನಗೆ ಹೊಸದಲ್ಲ. ಚಿಕ್ಕಂದಿನಿಂದಲೇ ಹಲವು ಬಾರಿ ಭೇಟಿ ನೀಡಿದ್ದೇನೆ. ನಮ್ಮ ತಂದೆ ಡಾ.ರಾಜಕುಮಾರ್ ಅವರ ಕಾಲದಿಂದಲೂ ಒಡನಾಟವಿದೆ. ಗುಲಬರ್ಗಾ ಈಗ ಕಲಬುರಗಿ ಮತ್ತು ಹೈದರಾಬಾದ್- ಕರ್ನಾಟಕ ಈಗ ಕಲ್ಯಾಣ ಕರ್ನಾಟಕ ಆಗಿದೆ. ಆದರೆ, ಮೊದಲಿನಿಂದಲೂ ಈ ಭಾಗದ ಒಡನಾಟ ಇದೆ ಎಂದರು.
‘ಯುವರತ್ನ’ ಚಿತ್ರದ ಪ್ರಚಾರವನ್ನು ಕಲ್ಯಾಣ ಕರ್ನಾಟಕದಿಂದಲೇ ಆರಂಭವಾಗುತ್ತಿದೆ. ಮುಂದೆ ಅನೇಕ ಕಡೆಗಳಲ್ಲಿ ಚಿತ್ರತಂಡದಿಂದ ಪ್ರಚಾರ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ನಟ ಧನಂಜಯ ‘ಯುವರತ್ನ’ದ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ‘ಧಮ್’ ಇರಬೇಕಾಗಿರುವುದು ‘ಬಾಯಿ’ ಅಲ್ಲ, ಎದೆಯಲ್ಲಿ ಎನ್ನುತ್ತಲೇ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.
ನಟ ರವಿಶಂಕರ್, ನಿರ್ದೇಶಕ ಸಂತೋಷ ಆನಂದರಾಮ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಈಶಾನ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಮುಖಂಡರಾದ ನಿತಿನ್ ಗುತ್ತೇದಾರ, ಶರಣಕುಮಾರ ಮೋದಿ ಮೊದಲಾದವರು ಇದ್ದರು.