ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿತ ಪತ್ರಕರ್ತರನ್ನು, ಭಿಕ್ಷುಕರನ್ನು ಹಿಡಿದು ಸಾಗಿಸುವ ವಾಹನದಲ್ಲಿ ಕರೆದೊಯ್ದ ಘಟನೆ ನಡೆದಿದೆ.
ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿ ಗ್ರಾಮ ವಾಸ್ಯವ್ಯ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಯಲಗೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಜಯಪುರ ಜಿಲ್ಲೆಯ ಪತ್ರಕರ್ತರಿಗೆ ವಾರ್ತಾ ಇಲಾಖೆಗೆ ಬಂದಿದ್ದ ಸುಸಜ್ಜಿತ ಹೊಸ ವಾಹನವನ್ನು ಕೆಲ ದಿನಗಳ ಹಿಂದೆ ಗದಗ ಜಿಲ್ಲೆಗೆ ಶಾಶ್ವತವಾಗಿ ಕಳುಹಿಸಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ವಾರ್ತಾ ಖಾತೆ ಹೊಂದಿರುವ ಸಿ.ಸಿ.ಪಾಟೀಲ ತಮ್ಮ ಪ್ರಭಾವ ಬಳಸಿ ವಿಜಯಪುರ ಜಿಲ್ಲೆಯ ವಾಹನವನ್ನು ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ವಾರ್ತಾ ಇಲಾಖೆಯ ಹಳೆಯ ವಾಹನಕ್ಕೆ ವಿಮಾ ಸೌಲಭ್ಯವಿಲ್ಲ, ಸೆಲ್ಪ್ ಸ್ಟಾರ್ಟ್ ಇಲ್ಲದ ಕಾರಣ ಪತ್ರಕರ್ತರೇ ತಳ್ಳಿ ವಾಹನ ಚಾಲನೆಗೆ ಮುಂದಾಗಬೇಕಿದೆ.
ವಿಜಯಪುರ ಜಿಲ್ಲೆಗೆ ವರ್ಗಾವಣೆಯಾದ ವಾಹನ
ಪರಿಣಾಮ ಈ ಬಾರಿಯ ಶನಿವಾರದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ನಿರ್ಗತಿಕರ ಪುರ್ವಸತಿ ಕೇಂದ್ರಕ್ಕೆ ಭಿಕ್ಷುಕರನ್ನು ಹಿಡಿದು ಸಾಗಿಸುವ ವಾಹನದಲ್ಲಿ ಯಲಗೂರ ಕಾರ್ಯಕ್ರಮಕ್ಕೆ ಕರೆದೊಯ್ದಿದ್ದಾರೆ.
ಈ ಕುರಿತು ಪತ್ರಕರ್ತರು ಜಿಲ್ಲಾ ವಾರ್ತಾ ಇಲಾಖೆಯ ವಾಟ್ಸಾಪ್ ಗುಂಪಿನಲ್ಲಿ ಆಕ್ಷೇಪಿಸಿದ್ದಾರೆ. ಈ ಗುಂಪಿನಲ್ಲಿರುವ ಜಿಲ್ಲಾಧಿಕಾರಿ ಸುನಿಲಕುಮಾರ ಅವರು ತಕ್ಷಣ ಎಚ್ಚೆತ್ತು, ಬೇರೆ ವಾಹನ ಸೌಲಭ್ಯ ಕಲ್ಪಿಸಿದ್ದಾರೆ.
ಜಿಲ್ಲೆಯ ಪತ್ರಕರ್ತರಿಗೆ ಬಂದಿದ್ದ ಹೊಸ ವಾಹನ ಸೌಲಭ್ಯ ಗದಗ ಜಿಲ್ಲೆಗೆ ವರ್ಗಾವಣೆ ಆಗಿದ್ದು, ವಿಮಾ ಸೌಲಭ್ಯವೂ ಇಲ್ಲದ ವಾಹನ ನೀಡಲಾಗಿದೆ. ಈ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರ ಗಮನಕ್ಕಿದ್ದರೂ ಜಿಲ್ಲೆಯ ಪತ್ರಕರ್ತರ ಹಿತ ಕಾಯುವಲ್ಲಿ ವಿಫಲರಾಗಿದ್ದಕ್ಕೆ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.