ಬೆಂಗಳೂರು, ಮಾ.8- ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಅಪಾರ್ಟ್ಮೆಂಟ್ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಕಡಿಮೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಧ್ಯಮವರ್ಗ ಕೈಗೆಟುಕುವ ಮನೆಗಳನ್ನು ಖರೀದಿಸಲು ಪ್ರೋತ್ಸಾಹಿಸುವ ಸಲುವಾಗಿ 35ರಿಂದ 45 ಲಕ್ಷಮೌಲ್ಯದೊಳಗಿನ ಅಪಾರ್ಟ್ಮೆಂಟ್ಗಳ ಖರೀದಿಯ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಲಾಗಿದೆ.
ಕಳೆದ ವರ್ಷ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,665 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ 9014 ಕೋಟಿ ಸಂಗ್ರಹವಾಗಿದೆ. ಮುಂದಿನ ವರ್ಷಕ್ಕೆ ಈ ಹಿಂದಿನ ವರ್ಷ ಇದ್ದಷ್ಟೇ (12,665ಕೋಟಿ) ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಗುರಿ ನಿಗದಿಯಲ್ಲಿ ತುಸು ಏರಿಕೆ ಮಾಡಲಾಗಿದೆ. ಕಳೆದ ವರ್ಷ 22,700 ಕೋಟಿ ಗುರಿಯಲ್ಲಿ ಫೆಬ್ರವರಿ ಅಂತ್ಯಕ್ಕೆ 20900 ಕೋಟಿ ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 24,580 ಕೋಟಿ ರೂ. ನಿಗದಿ ಮಾಡಲಾಗಿದೆ.
ಸಾರಿಗೆ ಇಲಾಖೆಯಲ್ಲಿ 7115 ಕೋಟಿ ರೂ. ಗುರಿ ನಿಗದಿ ಪಡಿಸಲಾಗಿತ್ತು. ಲಾಕ್ಡೌನ್ ಹಾಗೂ ಕೊರೊನಾದಿಂದಾಗಿ ಜನವರಿ ಅಂತ್ಯದವರೆಗೆ ಶೇ.60ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ಮುಂದಿನ ವರ್ಷಕ್ಕೆ 7515 ಗುರಿ ನಿಗದಿಪಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.