ಬೆಳಗಾವಿ: ಕೊರೊನಾ ಸೋಂಕು ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಮತ್ತು ಸಚಿವರು, ಅಧಿಕಾರಿಗಳ ಮಧ್ಯೆ ಸಮನ್ವಯತೆ ಕೊರತೆಯಿಂದ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.
ಗೋಕಾಕ ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಚಲಾಯಿಸುವುದೊಂದೆ ಅವರ ಗುರಿಯಾಗಿದೆ. ಹೇಗಾದರು ಮಾಡಿ ದಿನ ದೂಡುತ್ತಿದ್ದಾರೆ. ಜನರ ಸಮಸ್ಯೆ ಪರಿಹರಿಸಲು ಇವರಿಗೆ ಇಂಟರೆಸ್ಟ್ ಇಲ್ಲವಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಿಂದ ಜನರಿಗೆ ಜಾಗೃತಿ:
ರಾಜ್ಯ ಸರ್ಕಾರ ಕೊರೊನಾ ಕಿಟ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಅದನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ಕುರಿತು ದಾಖಲೆ ಸಮೇತ ಹೋರಾಟ ಮಾಡಲಿದೆ. ಜನರಿಗೆ ಏಳೆ ಏಳೆಯಾಗಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅಧಿವೇಶದಲ್ಲಿಯೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಗೋಕಾಕ-ಚಿಕ್ಕೋಡಿಯಲ್ಲಿ ಲ್ಯಾಬ್ ಆರಂಭಿಸಿ:
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತಲಿದ್ದು, ಈ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಚಿಕ್ಕೋಡಿಯಲ್ಲಿ ಕೊರೊನಾ ಪರೀಕ್ಷೆ ಲ್ಯಾಬ್ ಆರಂಭಿಸುವಂತೆ ಮತ್ತೆ ಒತ್ತಾಯಿಸಿದರು. ಸೋಂಕಿತರ ಸಂಖ್ಯೆ ಹೆಚ್ಚುತಲಿರುವುದುರಿಂದ ಲ್ಯಾಬ್ ಸಿಬ್ಬಂದಿಗಳಿಗೆ ಒತ್ತಡ ಹೇರಲಾಗುತ್ತಿದೆ. ಒತ್ತಡದ ಕೆಲಸದಲ್ಲಿ ಕೆಲವು ಅಚಾತುರ್ಯ ನಡೆಯುತ್ತಿವೆ. ನೆಗಟಿವ್ ಇದ್ದವರ ವರದಿ ಪಾಸಿಟಿವ್ ಬರುತ್ತಿದೆ. ಇದರಿಂದ ಗೊಂದಲ ಮೂಡುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಎಲ್ಲೆಡೆ ಕೊರೊನಾ ಲ್ಯಾಬ್ ಹೆಚ್ಚಳ ಮಾಡುವಂತೆ ಒತ್ತಾಯಿಸಿದರು.