ಬೆಂಗಳೂರು, ಫೆ.3 (ಪಿಟಿಐ)- ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲನೀಡಲು ಸರ್ಕಾರ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಸಂಗ್ರಹಿಸಲಿದೆ. ರಾಜ್ಯ ಸರ್ಕಾರ ನಡೆಸುವ ಅತ್ಯಂತ ದೊಡ್ಡ ಏರೋಸ್ಪೇಸ್ ಕಂಪನಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನಡುವೆ 48,000 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ.
ನಗರದಲ್ಲಿ ಬುಧವಾರ ದೇಶದ ಪ್ರತಿಷ್ಠಿತ ಏರೋ ಇಂಡಿಯಾ-2021 ಶೋ ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಎಚ್ಎಎಲ್ ತಯಾರಿಸಿದ ತೇಜಸ್ ಒಂದೇ ಎಂಜಿನ್ ಮತ್ತು ಹೆಚ್ಚು ಚುರುಕುಬುದ್ಧಿಯ ಬಹುಪಾತ್ರ ನಿರ್ವಹಿಸಬಲ್ಲ ಸೂಪರ್ ಸಾನಿಕ್ ಯುದ್ಧ ವಿಮಾನ. ಅಗಸದಲ್ಲಿ ಅತಿ ಹೆಚ್ಚು ಎತ್ತರದ ವಾಯು ಪರಿಸರದಲ್ಲೂ ಸಹ ಕಾರ್ಯ ನಿರ್ವಹಿಸುತ್ತದೆ ಎಂದರು.
ಇಂತಹ ಲಘು ಯುದ್ಧ ವಿಮಾನಗಳು ರಕ್ಷಣಾ ಬಲವನ್ನು ಹೆಚ್ಚಿಸಲಿವೆಯಾದ್ದರಿಂದ ಎಚ್ಎಎಲ್ ಸಂಸ್ಥೆಗೆ, ತೇಜಸ್ ನಿರ್ಮಾಣದ ಜವಾಬ್ದಾರಿ ವಹಿಸಿದ್ದೇವೆ. ರಾಜ್ಯದ ಎಚ್ಎಎಲ್ನಿಂದ 83 ವಿಮಾನಗಳನ್ನು ಸಂಗ್ರಹಿಸಲು 48 ಸಾವಿರ ಕೋಟಿ ರೂ.ಗಳ ಬಹುದೊಡ್ಡ ಒಪ್ಪಂದವೇರ್ಪಟ್ಟಿದೆ.
73 ತೇಜಸ್ ಎಂಕೆ-ಐಎ ಹಾಗೂ 10 ಎಲ್ಸಿಎ ತೇಜಸ್ ಎಂಕೆ-ಐ ತರಬೇತಿ ಏರ್ಕ್ರಾಫ್ಟ್ ಪೂರೈಸುವ ಎಚ್ಎಎಲ್ ನಡುವಿನ ಒಪ್ಪಂದವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಕಳೆದ ತಿಂಗಳು ಅನುಮೋದಿಸಿದೆ. ಇದರಿಂದ ರಕ್ಷಣಾ ಬಲ ಮತ್ತಷ್ಟು ಹೆಚ್ಚಲಿದೆ ಹಾಗೂ ಎಚ್ಎಎಲ್ನ ಉತ್ಪಾದನಾ ಪ್ರಮಾಣ ವೃದ್ಧಿಸಲಿದೆ ಎಂದು ತಿಳಿಸಿದರು.
ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಒಪ್ಪಂದ ಪತ್ರವನ್ನು ರಕ್ಷಣಾ ಮಂತ್ರಾಲಯದ ಮಹಾನಿರ್ದೇಶಕ (ಸ್ವಾಧೀನ) ವಿ.ಎಲ್. ಕಾಂತಾ ರಾವ್ ಹಾಗೂ ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಅವರಿಗೆ ಹಸ್ತಾಂತರಿಸಲಾಯಿತು.