ಪತಿಯೊಂದಿಗೆ ರಾತ್ರಿ ಊಟ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ನಟಿಯ ಕಾರನ್ನು ನಾಲ್ವರು ಕುಡುಕರು ಹಿಂಬಾಲಿಸಿ ಅಪಘಾತ ಮಾಡಿದ್ದಾರೆ.
ಹಿಂದಿ ಧಾರಾವಾಹಿ ನಟಿಗೆ ಈ ಕೆಟ್ಟ ಅನುಭವ ಆಗಿದ್ದು, ನಟಿಯು ತನ್ನ ಪತಿಯೊಂದಿಗೆ ಜನವರಿ 31 ರಂದು ದೆಹಲಿಯ ಐಶಾರಾಮಿ ಹೋಟೆಲ್ ಒಂದಕ್ಕೆ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಊಟ ಮುಗಿಸಿ ರಾತ್ರಿ 2 ಗಂಟೆ ವೇಳೆಗೆ ವಾಪಸ್ಸಾಗಬೇಕಾದರೆ ಘಟನೆ ನಡೆದಿದೆ.
ದೆಹಲಿಯ ಮಧುಬನ್ ಚೌಕ್ ಬಳಿ ನಟಿಯ ಕಾರು ಹೋಗಬೇಕಾದರೆ ನಾಲ್ವರು ವ್ಯಕ್ತಿಗಳು ರಸ್ತೆ ಬಳಿ ಕಾರು ನಿಲ್ಲಿಸಿಕೊಂಡಿದ್ದರು. ಕಾರು ಚಲಾಯಿಸುತ್ತಿದ್ದ ನಟಿಯ ಪತಿ ಮುಂದೆ ಹೋಗಲು ಹಾರ್ನ್ ಮಾಡಿದ್ದಾರೆ. ಇದು ಆ ನಾಲ್ವರಿಗೆ ಹಿಡಿಸದೆ, ತಮ್ಮ ಕಾರು ಏರಿ ನಮ್ಮ ಕಾರನ್ನು ಹಿಂಬಾಲಿಸಲು ಪ್ರಾರಂಭಿಸಿದರು’ ಎಂದು ನಟಿಯು ಕೊಟ್ಟಿರುವ ದೂರಿನಲ್ಲಿ ಹೇಳಿದ್ದಾರೆ.
ನಾವು ವಾಸಿಸುವ ಅಪಾರ್ಟ್ಮೆಂಟ್ ಅವರಿಗೆ ಗೊತ್ತಾಗುವುದು ಬೇಡವೆಂದು ನಾವು ಕಾರನ್ನು ಬೇರೆ ದಿಕ್ಕಿನಲ್ಲಿ ಓಡಿಸಿ ಅವರ ದಾರಿ ತಪ್ಪಿಸಿದೆವು. ನಂತರ ನಾವು ನಮ್ಮ ಅಪಾರ್ಟ್ಮೆಂಟ್ ಗೇಟಿನ ಬಳಿ ಬರುತ್ತಿದ್ದಂತೆ ಆ ನಾಲ್ವರು ತಮ್ಮ ಕಾರಿನಲ್ಲಿ ನಮ್ಮ ಕಾರಿನ ಹಿಂದೆ ಬಂದು ಗುದ್ದಿದರು’ ಎಂದು ನಟಿ ಹೇಳಿದ್ದಾರೆ.
ನಾವು ಅಪಾರ್ಟ್ಮೆಂಟ್ ಗೇಟಿನ ಒಳಗೆ ಹೋದೆವು. ಅವರೂ ಒಳಗೆ ಬಂದು ನಮಗೆ ಬೆದರಿಕೆಗಳನ್ನು ಹಾಕಿದರು. ಆಗ ನಾವು ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದೆವು, ಕೂಡಲೇ ಎರಡು ವಾಹನಗಳಲ್ಲಿ ಪೊಲೀಸರು ಬಂದು ಆ ನಾಲ್ವರನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು’ ಎಂದಿದ್ದಾರೆ ನಟಿ.
‘ನಾನು ದೆಹಲಿಯಲ್ಲಿ ವಾಸಿಸುವುದಿಲ್ಲ, ನನ್ನ ಪತಿಯ ತಂದೆ-ತಾಯಿ ಇಲ್ಲಿ ವಾಸಿಸುತ್ತಾರೆ. ನಾನು ಮಹಿಳೆ ಸುರಕ್ಷತೆ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಇಂದು ನನಗೇ ಇಂಥಹಾ ಕೆಟ್ಟ ಅನುಭವ ಆಗಿದೆ’ ಎಂದಿದ್ದಾರೆ ಆ ನಟಿ. ಮಹಿಳಾ ದೌರ್ಜನ್ಯ ಪ್ರಕರಣವೂ ಇದು ಆಗಿರುವ ಕಾರಣ ಪೊಲೀಸರು ನಟಿಯ ಹೆಸರು ಬಹಿರಂಗಪಡಿಸಿಲ್ಲ.