ಯಾದಗಿರಿ: ಸಚಿವ ಸ್ಥಾನ ಸಿಗದ ಹಿನ್ನಲೆ ಅಸಮಾಧಾನಗೊಂಡಿರುವ ಸುರಪುರ ಶಾಸಕ ರಾಜುಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ಸುದ್ದಿ ದಟ್ಟವಾಗಿತ್ತು. ಈ ಕುರಿತು ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದು, ಇದು ಕೇವಲ ವದಂತಿ. ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿರುವ ತಮ್ಮ ನಿಗಮದ ಮೇಲೆ ಕಣ್ಣಿಟ್ಟಿರುವ ಯಾರೋ ಬಿಜೆಪಿ ನಾಯಕರೇ ಈ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಶಾಸಕ ರಾಜೂಗೌಡ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಈ ರೀತಿಯ ವದಂತಿಗಳಿಗೆ ಗಮನ ಕೊಡಬಾರದು ಎಂದು ಇದೇ ವೇಳೆ ಮನವಿ ಮಾಡಿದರು.
ಆನಂದ್ ಸಿಂಗ್ ಭೇಟಿ ಕುರಿತು ಸ್ಪಷ್ಟಪಡಿಸಿದ ಅವರು, ಬಿಜೆಪಿ ವರಿಷ್ಠರ ಸೂಚನೆ ಮೆರೆಗೆ ನಿನ್ನೆ ಸಚಿವ ಆನಂದ ಸಿಂಗ್ ಭೇಟಿಯಾಗಿ ಮಾತುಕತೆ ಮಾಡಿದ್ದಾನೆ. ಆನಂದ್ ಸಿಂಗ್ ಖಾತೆ ಬದಲಾಣೆಯಿಂದಾಗಿ ಬೇಸರವಾಗಿತ್ತು. ಇದರಿಂದ ಅವರನ್ನು ಭೇಟಿ ಮಾಡಿ ಸಮಾಧಾನ ಮಾಡುವ ಯತ್ನ ನಡೆಸಿದೆ. ಈ ವೇಳೆ ಅವರು ಬಿಜೆಪಿಗೇ ಯಾವುದೇ ಷರತ್ತು ವಿಧಿಸಿ ಬಂದಿಲ್ಲ ಎಂಬುದನ್ನು ತಿಳಿಸಿದರು ಎಂದರು.