ಬೆಂಗಳೂರು(ಹೊಸಕೋಟೆ): ನಿಧಿ ಆಸೆಗೆ 8 ತಿಂಗಳ ಗಂಡು ಮಗುವನ್ನು ಬಲಿ ಕೊಡುವ ಯತ್ನ ನಡೆಯುತ್ತಿದೆ ಎಂಬ ದೂರಿನ ಮೇಲೆ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ತಂಡ ದಾಳಿ ಮಾಡಿ, ಮಗುವನ್ನು ರಕ್ಷಿಸಿದ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ನಡೆದಿದೆ.
ಸೈಯದ್ ಇಮ್ರಾನ್ ಎಂಬಾತನ ಮನೆ ಮೇಲೆ ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಲೈನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಸೂಲಿಬೆಲೆ ಪೊಲೀಸರು ದಾಳಿ ಮಾಡಿದ್ದಾರೆ.ಈ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮ್ಮ ಮಾಧ್ಯಮದೊಂದಿಗೆ ಮಾತನಾಡಿ, “ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ನಿಧಿ ತೆಗೆಯುವ ಉದ್ದೇಶಕ್ಕೆ ಮಗುವನ್ನು ಬಲಿಕೊಡಲು ಒಂದು ಮನೆಯಲ್ಲಿ 8 ತಿಂಗಳ ಮಗು ಸಾಕಿದ್ದಾರೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇರೆಗೆ ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಲೈನ್ ಹಾಗೂ ನಾವು ದಾಳಿ ಮಾಡಿ ಮಗುವನ್ನು ರಕ್ಷಣೆ ಮಾಡಿದೆವು. ಆ ಮನೆಯ ಕೋಣೆಯೊಂದರಲ್ಲಿ ಗುಂಡಿ ತೋಡಿದ್ದರು. ಸ್ಥಳದಲ್ಲಿ ಪೂಜಾ ಸಾಮಗ್ರಿ ಸಿಕ್ಕಿದೆ. ಇವುಗಳು ಮೇಲ್ನೋಟಕ್ಕೆ ಅನುಮಾನಾಸ್ಪದವಾಗಿ ಕಂಡುಬಂದಿವೆ” ಎಂದು ತಿಳಿಸಿದರು.
Laxmi News 24×7