ನವದೆಹಲಿ,ಡಿ.30- ಸರ್ಕಾರ ತನ್ನ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೂ ರೈತರ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಕೇಂದ್ರ ರೈತರೊಂದಿಗೆ 6ನೇ ಸುತ್ತಿನ ಮಾತುಕತೆ ನಡೆಸಲು 40ಕ್ಕೂ ಹೆಚ್ಚು ರೈತ ಒಕ್ಕೂಟಗಳನ್ನು ಆಹ್ವಾನಿಸಿದೆ. ಇಂದು ದೆಹಲಿಯ ವಿಜ್ಞಾನ ಭವನಕ್ಕೆ ಎರಡು ಬಸ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ , ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆಯದ ಹೊರತು ನಮ್ಮ ಹೋರಾಟ ನಿಲ್ಲುವುದಿಲ್ಲ. ಕೇಂದ್ರ ತನ್ನ ನಿಲುವನ್ನು ಬದಲಿಸಿಕೊಳ್ಳುವುದೊಂದೆ ಮಾರ್ಗ ಎಂದು ರೈತ ಒಕ್ಕೂಟಗಳು ಆಗ್ರಹಿಸಿವೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಯೂನಿಯನ್ನ ಅಧ್ಯಕ್ಷ ಮಂಜೀತ್ ಸಿಂಗ್, ಪ್ರತಿಭಟನೆ ಕೈಬಿಡಬೇಕೆಂದರೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಪ್ರಧಾನಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಮೊದಲು ನಮ್ಮ ಬೇಡಿಕೆಗಳನ್ನು ಪರಿಗಣಿಸಲಿ. ಇದುಬಿಟ್ಟರೆ ಅನ್ಯಮಾರ್ಗ ಇಲ್ಲ ಎಂದರು.
ಕಾಯ್ದೆಗಳ ಕುರಿತು ರೈತರಿಂದ ಸರ್ಕಾರ ಸಲಹೆ ಕೇಳಲು ಇಚ್ಚಿಸುವುದಾದರೆ, ನಮಗೆ ಕೃಷಿ ತಿದ್ದುಪಡಿ ಕಾಯ್ದೆಗಳು ಬೇಡ. ಈ ವಿಷಯದಲ್ಲಿ ಸರ್ಕಾರ ಮೋಂಡು ವಾದ ಮಾಡದೆ ಈ ಕಾಯ್ದೆಗಳನ್ನು ಹಿಂಪಡೆಯಲಿ ಎಂದು ಮತ್ತೊಬ್ಬ ರೈತ ನಾಯಕ ಬಲ್ವಿಂದರ್ ಸಿಂಗ್ ರಾಜು ಹೇಳಿದರು.
ಮೂರು ಕೇಂದ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ನಾಲ್ಕು ನಿರ್ದಿಷ್ಟ ಕಾರ್ಯಸೂಚಿಗಳ ಕುರಿತು ಸಭೆ ನಡೆಸಲು ರೈತರು ಬಯಸುತ್ತಿದ್ದಾರೆ. ಇಂದಿನ ಸಭೆಯಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.