ಬೆಂಗಳೂರು(ಡಿ. 29): ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರ ನಿಧನಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ನೋವು ವ್ಯಕ್ತಪಡಿಸಿದರು. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ ಎಂದು ವಿಷಾದಿಸಿದರು. ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಸಜ್ಜನ ವ್ಯಕ್ತಿತ್ವದ ಧರ್ಮೇಗೌಡರು ಬಲಿಯಾಗಿದ್ಧಾರೆ ಎಂದೂ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಂಡಿದ್ದು, ಇವತ್ತಿನ ಎಲ್ಲಾ ರಾಜಕಾರಣಿಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಧರ್ಮೇಗೌಡರ ತಂದೆ ಲಕ್ಷ್ಮಯ್ಯ 2004ರಲ್ಲಿ ಒಂದು ಮಾತು ಕೇಳಿದ್ದರು. ನಾನು ಕಣ್ಮುಚ್ಚುವುದರೊಳಗೆ ನನ್ನ ಮಗನನ್ನು ಮಂತ್ತಿಯಾಗಿ ನೋಡುವ ಆಸೆ ಇದೆ ಎಂದು ಆಸೆ ತೋಡಿಕೊಂಡಿದ್ದರು. ನಮಗೆ ಧರ್ಮೇಗೌಡರನ್ನು ಮಂತ್ರಿ ಮಾಡಲು ಆಗಲಿಲ್ಲ. ಎಂಎಲ್ಸಿ ಮಾಡಿ ಉಪಸಭಾಪತಿ ಮಾಡಿದೆವು. ಉಪಸಭಾಪತಿಯನ್ನಾಗಿ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ ಎಂದು ಹೆಚ್ಡಿಕೆ ಬೇಸರಪಟ್ಟರು.