ಬೆಳಗಾವಿ(ಡಿ. 26): ಬೆಳಗಾವಿ ಮಹಾನಗರ ಪಾಲಿಕೆ ಭಾಷೆ, ಗಡಿ ವಿಚಾರವಾಗಿ ರಾಜ್ಯದಲ್ಲಿ ಅನೇಕ ಸಲ ಸುದ್ದಿಯಾಗಿದೆ. ಅನೇಕ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯಲು ಇದೇ ವಿಚಾರವನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ರಾಜಕೀಯ ಪಕ್ಷಗಳು ಭಾಷೆ ಆಧಾರದ ಬದಲಾಗಿ ಪಕ್ಷದ ಆಧಾರದ ಮೇಲೆ ಸ್ಪರ್ಧಿಸಲು ಸಜ್ಜಾಗಿವೆ. 2019ರ ಮಾರ್ಚ್ ತಿಂಗಳಲ್ಲಿಯೇ ಮಹಾನಗರ ಪಾಲಿಕೆ ಅವಧಿ ಮುಕ್ತಾಯವಾಗಿದೆ. ಆದರೆ, ಮೀಸಲಾತಿ, ವಾರ್ಡ್ ವಿಂಗಡಣೆ ವಿಚಾರದಲ್ಲಿ ವಿವಾದ ಉಂಟಾಗಿ ಕೋರ್ಟ್ ಮೆಟ್ಟಿಲು ಏರಿದ್ದರ ಪರಿಣಾಮ ಚುನಾವಣೆ ವಿಳಂಬವಾಗಿದೆ. ಈಗ ಪಾಲಿಕೆ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಈ ಹಿನ್ನಲೆ ಚುನಾವಣೆಗೆ ಸಿದ್ದವಾಗುತ್ತಿರುವ ಪಕ್ಷಗಳು ಈ ಬಾರಿ ಭಾಷೆ ಬದಲು ಪಕ್ಷದ ಆಧಾರದ ಮೇಲೆ ಚುನಾವಣೆ ಗೆಲ್ಲಬೇಕು ಎಂದು ನಿರ್ಧರಿಸಿವೆ. ಇನ್ನು ಈ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್, ಚುನಾವಣೆ ನಿರ್ವಹಣಾ ಸಮಿತಿ ರಚನೆ ಮಾಡಿದೆ. ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ಉಸ್ತುವಾರಿ ಹೊಣೆ ನೀಡಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್, ಎಂ ಡಿ ಲಕ್ಷ್ಮೀನಾರಾಯಣ ಸಂಯೋಜಕರಾಗಿ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಸಿದರೆ, ಬಿಜೆಪಿ ಸಹ ಪಕ್ಷದ ಚಿನ್ಹೆ ಮೇಲೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿ ತೀರ್ಮಾನದಿಂದ ಕನ್ನಡ ಪರ ಹೋರಾಟಗಾರಿಗೆ ಆತಂಕ ಎದುರಾಗಿದೆ. ಕಾಂಗ್ರೆಸ್, ಬಿಜೆಪಿ ಜತೆಗೆ ಅಭ್ಯರ್ಥಿ ಕಣಕ್ಕೆ ಇಳಿಸಲು ಎಂಐಎಂ ಸಹ ತೀರ್ಮಾನ ಮಾಡಿದೆ. ಈ ಹಿನ್ನಲೆ ಕಾಂಗ್ರೆಸ್, ಬಿಜೆಪಿ ಹಾಗೂ ಎಂಐಎಂ ಅಂತ ಮತಗಳ ವಿಭಜನೆ ಆಗಲಿದೆ. ಈ ಮತ ವಿಭಜನೆಯಿಂದ ಎಂಇಎಸ್ ಲಾಭ ಆಗುವ ಆತಂಕ ಸೃಷ್ಟಿಯಾಗಿದೆ.ನಗರಸಭೆಯಿಂದ 1984ರಲ್ಲಿ ಮಹಾನಗರ ಪಾಲಿಕೆ ಆಗಿ ಬೆಳಗಾವಿ ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಏರಿತ್ತು. ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಲು ಹಲವು ಸಲ ಪ್ರಯತ್ನ ನಡೆದು ಅದು ವೈಫಲ್ಯ ಕಂಡಿದೆ. ಪ್ರತಿ ಸಹ ಎಂಇಎಸ್ ಪಾಲಾಗುವ ಬೆಳಗಾವಿ ಮಹಾನಗರ ಪಾಲಿಕೆಗೆ ಈವರೆಗೆ ಕೇವಲ ಮೂರ್ನಾಲ್ಕು ಜನ ಮಾತ್ರ ಕನ್ನಡ ಮೇಯರ್ ಆಗಿದ್ದಾರೆ. ಈ ಸಲ ಕನ್ನಡ ಭಾಷಿಕರಿಗೆ ಈ ಸಲ ರಾಷ್ಟ್ರೀಯ ಪಕ್ಷಗಳಿಂದ ಆತಂಕ ಎದುರಾಗಿದೆ.