ಅನಿಲ್ ಬೆನಕೆ ಮರಾಠಿ ಬ್ಯಾನರ್ಗೆ ಕಪ್ಪು ಮಸಿ..ಬ್ಯಾನರ್ ಹರಿದು ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾಂವಿ ಆಕ್ರೋಶ.
ಬೆಳಗಾವಿ ಆರ್ಟಿಒ ಸರ್ಕಲ್ನಲ್ಲಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮತ್ತು ತಂಡ ಅಳವಡಿಸಿದ್ದ ಮರಾಠಿ ಭಾಷೆಯ ಬ್ಯಾನರ್ಗೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಆಯೋಜಿಸಿರುವ ಕ್ರಿಕೆಟ್ ಟೂರ್ನಾಮೆಂಟ್ ಮಾಹಿತಿ ನೀಡುವ ಪ್ರಚಾರ ಫಲಕವನ್ನು ಆರ್ಟಿಒ ಸರ್ಕಲ್ ಬಳಿ ಮರಾಠಿ ಭಾಷೆಯಲ್ಲಿ ಅಳವಡಿಸಲಾಗಿದೆ. ಶಾಸಕ ಅನಿಲ ಬೆನಕೆ ಭಾವಚಿತ್ರವಿರುವ ಈ ಮರಾಠಿ ಭಾಷೆಯ ಪ್ರಚಾರ ಫಲಕದ ಬಗ್ಗೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ಚುನಾಯಿತರಾಗಿರುವ ಶಾಸಕ ಅನಿಲ ಬೆನಕೆ ಮರಾಠಿ ಭಾಷೆಯನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಭಾವಿ ಮತ್ತು ಸಂಗಡಿಗರು ಇಂದು ಮರಾಠಿ ಭಾಷೆಯ ನಾಮಫಲಕ ಇರುವ ಪ್ರದೇಶಕ್ಕೆ ಭೇಟಿ ನೀಡಿ, ಕಪ್ಪು ಮಸಿ ಬಳಿದರು. ಶಾಸಕ ಅನಿಲ ಬೆನಕೆ ಭಾವಚಿತ್ರಕ್ಕೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಭಾವಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಮರಾಠಿಯನ್ನೇ ಬಳಸುತ್ತಾರೆ. ಬಿಜೆಪಿಯವರು ಎಂದುಕೊAಡು ಉತ್ತರ ಕ್ಷೇತ್ರದಲ್ಲಿ ನಾವೇ ಆರಿಸಿದ ನಮ್ಮ ಶಾಸಕರು ಮರಾಠಿ ಪ್ರೇಮ ಮೆರೆಯುತ್ತಿದ್ದಾರೆ. ಮರಾಠಿ ಭಾಷೆಯ ಫಲಕ ತೆಗೆಯಬೇಕು ಎಂದು ಮಸಿ ಎರಚಿದ್ದೇನೆ ಎಂದರು.
ಒಟ್ಟಿನಲ್ಲಿ ಕನ್ನಡ ಬಳಸಲು, ಕನ್ನಡದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿರುವ ಮರಾಠಿ ಭಾಷಿಕರ ಬಗ್ಗೆ ಬೆಳಗಾವಿಯಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗುತ್ತಿದೆ.