ಶಿವಮೊಗ್ಗ, ಡಿ.24- ಇಲ್ಲಿನ ಡಿಎಆರ್ ಆವರಣದಲ್ಲಿರುವ ಆಂತರಿಕ ಭದ್ರತಾ ವಿಭಾಗದ ಕಚೇರಿಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ನಿರಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಕಚೇರಿಗೆ ಬೀಗ ಜಡಿದಿದ್ದಾರೆ.
ಎರಡು ದಿನಗಳ ಹಿಂದೆ ಭಾಸ್ಕರ್ ರಾವ್ ಶಿವಮೊಗ್ಗದಲ್ಲಿ ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಭೇಟಿ ನೀಡಿದಾಗ ಇಲ್ಲಿನ ಸಿಬ್ಬಂದಿಗಳ ಕಾರ್ಯ ವೈಖರಿಯ ಪರಿಶೀಲನೆ ನಡೆಸಿ ತಿಂಗಳ ಹಿಂದೆಯೇ ಸೂಚನೆ ಕೊಟ್ಟಿದ್ದರೂ ಸ್ಪೋಟಕ ಸಂಗ್ರಹ ಮತ್ತು ಕೋಮು ಸಂಘರ್ಷದ ವ್ಯಕ್ತಿಗಳ ಬಗ್ಗೆ ಕ್ರಮ ವಹಿಸದಿರುವುದಕ್ಕೆ ಅಸಮಾಧಾನಗೊಂಡು ಕಚೇರಿಗೆ ಬೀಗ ಹಾಕಿ ಕೀ ತೆಗೆದುಕೊಂಡು ಹೋಗಿದ್ದಾರೆ
ಈ ಕಚೇರಿಯಲ್ಲಿ ಇನ್ಸ್ಪೆಕ್ಟರ್ ರುದ್ರೇಶ್ , ಒಬ್ಬರು ಮಹಿಳಾ ಪಿಎಸ್ಐ, ಒಬ್ಬರು ಹೆಚ್ಸಿ ಮತ್ತು ಪೊಲೀಸ್ ಕಾನ್ಸ್ಟೇಬಲ್ಗಳಿದ್ದು, ತಮ್ಮ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ನಂತರ ನಿನ್ನೆ ಸಾಗರ ತಾಲ್ಲೂಕು ಆನಂದಪುರಂನಲ್ಲಿ ಕಾರ್ಯಾಚರಣೆಗಿಳಿದು ಮಲ್ಲಂದೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬ್ದುಲ್ ಖಾದರ್ ಎಂಬುವವರ ಹಳೇ ಮನೆಯಲ್ಲಿ ಸುಮಾರು 30 ಸಾವಿರ ಬೆಲೆಬಾಳುವ ಸ್ಪೋಟಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಸಂಬಂಧ ಅವರ ವಿರುದ್ದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.