ಬೆಂಗಳೂರು,ಡಿ.-ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯನ್ನು ಗೆದ್ದು ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಬೆಂಗಳೂರಿನಲ್ಲಿ ವಿಜಯದ ಪತಾಕೆ ಹಾರಿಸಲು ಮುಂದಾಗಿದೆ. ಇದಕ್ಕಾಗಿ ಬೆಂಗಳೂರಿನ ಜನತೆಗೆ ಭರಪೂರಾ ಕೊಡುಗೆಗಳನ್ನು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಐಟಿಸಿಟಿ, ಉದ್ಯಾನನಗರಿ ಬೆಂಗಳೂರಿಗೆ ಹಲವು ಭರವಸೆಗಳ ಮಹಾಪೂರವನ್ನೇ ಹರಿಸಿದ್ದು, ಬೆಂಗಳೂರು ವಿಷನ್ 2020ರಿಂದ ಪಾರ್ಕ್, ಫ್ಲೈ ಓವರ್ ವರೆಗೆ ಬೆಂಗಳೂರು ಬಗ್ಗೆ ಹಲವು ದೂರದೃಷ್ಟಿ ಹರಿಸಿದ್ದಾರೆ.
ಈ ಮೂಲಕ ಬೆಂಗಳೂರು ನಗರಕ್ಕೆ ಹೊಸ ನೋಟ ನೀಡಲು ಹೊರಟಿದ್ದಾರೆ. ವಿಧಾನ ಸೌಧದಿಂದ ವಚ್ರ್ಯುವಲ್ ಸಭೆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಕಾಮಗಾರಿಗಳಿಗೆ, ಅಭಿಯಾನಗಳಿಗೆ ಚಾಲನೆ ನೀಡಲಿದ್ದಾರೆ. ನಗರದ ಅತ್ಯಂತ ಹೆಚ್ಚು ಸಂಚಾರ ದಟ್ಟಣಿಯುಳ್ಳ 12 ಕಾರಿಡಾರ್ಗಳ ರಸ್ತೆಗಳನ್ನು ಗುರುತಿಸಲಾಗಿದೆ.
ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಹಾಗೂ ಸೈಕಲ್ ಲೇನ್ ಸ್ಥಾಪಿಸಿ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ನಿರ್ಧರಿಸುವ ಚಿಂತನೆಯಿದ್ದು, ಪ್ರಸ್ತುತ ಬಿಎಂಟಿಸಿ ಬಳಿ 6,500 ಬಸ್ಗಳಿದ್ದು ಹೆಚ್ಚುವರಿಯಾಗಿ 6,500 ಬಸ್ಗಳನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗಿದೆ.
ಬಿಎಂಟಿಸಿಗೆ ಹೊಸ ಬಸ್ ಖರೀದಿಸುವ ಬದಲು ಒಪ್ಪಂದದ ಮೇರೆಗೆ ಬಸ್ ಉತ್ಪಾದಿಸುವ ಕಂಪನಿಗಳಿಂದ ನೇರವಾಗಿ ಬಾಡಿಗೆ ಮೂಲಕ ಬಸ್ ಪಡೆಯುವುದು, ಹೊಸ ಬಸ್ಗಳ ಪೈಕಿ ಶೇಖಡಾ 50ರಷ್ಟು ಎಲೆಕ್ಟ್ರಿಕ್ ಬಸ್ಗಳನ್ನು ಪಡೆದುಕೊಂಡು,ಇವುಗಳನ್ನು ಪ್ರತ್ಯೇಕ ಲೇನ್ ಸಂಚಾರದಲ್ಲಿ ಬಳಸಿಕೊಳ್ಳುವುದು, ಈ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ.