ಬೆಳಗಾವಿ: ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ನೌಕರರ ಮನವಿ ಆಲಿಸಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಸರಿಯಾಗಿ ವೇತನ ನೀಡಬೇಕು. ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಹೀಗೆ ಸಾರಿಗೆ ಸಿಬ್ಬಂದಿಯ ಅನೇಕ ಅಂಶಗಳುಳ್ಳ ಬೇಡಿಕೆ ಇವೆ. ಮುಖ್ಯಮಂತ್ರಿಗಳು,ಸಾರಿಗೆ ಮಂತ್ರಿಗಳು ಮಧ್ಯೆಸ್ಥಿಕೆ ವಹಿಸಿ ನೌಕರರಿಗೆ ಸಂಧಾನ ಮಾಡಬೇಕು ಎಂದು ಸಲಹೆ ನೀಡಿದರು.
ಕೆಲವು ಕಡೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಹಾಕಿರುವ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಸದಸ್ಯ ಸ್ಥಾನಗಳ ಹರಾಜು ಹಾಕಲು ಅವಕಾಶವಿಲ್ಲ. ಆ ರೀತಿ ಮಾಡಲಾಗದು. ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಹರಾಜು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದುಡ್ಡು ತಗೆದುಕೊಂಡು ಆಯ್ಕೆ ಮಾಡುವುದು ಸರಿಯಾದ ಕ್ರಮವಲ್ಲ. ಚುನಾವಣೆ ನಡೆಯಬೇಕು ಇಲ್ಲವೇ ಅವಿರೋಧ ಆಯ್ಕೆಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು.